ಕೋಟ: ಸಮುದ್ರ ತೀರದಲ್ಲಿ ಗುಂಡು ಪಾರ್ಟಿ; ಕಸದ ತೊಟ್ಟಿ ಕಿತ್ತೆಸೆದ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ

ಕುಂದಾಪುರ: ಕೋಟದ ಮಣೂರು ಪಡುಕರೆ ಸಮುದ್ರ ಕಿನಾರೆಯಲ್ಲಿ ಸ್ವಚ್ಛತೆಗಾಗಿ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಕಬ್ಬಿಣದ ಕಸದ ತೊಟ್ಟಿಯನ್ನು ಕಿಡಿಗೇಡಿಗಳು ಕಿತ್ತೆಸೆದ ಘಟನೆ ಶನಿವಾರ ತಡ ರಾತ್ರಿ ನಡೆದಿದ್ದು, ಕಡಲ ತೀರದಲ್ಲಿ ನಡೆಯುತ್ತಿರುವ ಮೋಜು ಮಸ್ತಿ ಗುಂಡು ಪಾರ್ಟಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೋಟದ ಮಣೂರು ಬೀಚ್ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಉದ್ದೇಶದೊಂದಿಗೆ ಎರಡು ವರ್ಷಗಳ ಹಿಂದೆ ಕೋಟ ಗ್ರಾಮ ಪಂಚಾಯತ್ ಸಮ್ಮುಖದಲ್ಲಿ ಗೀತಾನಂದ ಫೌಂಡೇಶನ್ ಸಂಸ್ಥೆಯು ಭೂಮಿ ಗಾತ್ರ ಹೊಲುವ ಸ್ವಚ್ಛತಾ ಸಂದೇಶ ಸಾರುವ ಕಬ್ಬಿಣದ ಕಸದತೊಟ್ಟಿಯನ್ನು ಅಳವಡಿಸಿ ಪ್ರವಾಸಿಗರಿಗೆ ಸೇರಿದಂತೆ ಬೀಚ್ ಸಮೀಪ ಸೇರುವ ಸಾರ್ವಜನಿಕರಿಗೆ ಅನುಕೂಲಕರ ವಾತಾವರಣ ನಿರ್ಮಿಸಿತ್ತು.ಇದರಿಂದ ಬೀಚ್ ಸುತ್ತಮುತ್ತ ಸ್ವಚ್ಛವಾಗಿದ್ದು ಬೀಚ್ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು. ಆದರೆ ಶನಿವಾರ ರಾತ್ರಿ ಪಾರ್ಟಿ ಮಸ್ತಿನಲ್ಲಿದ್ದ ಕೆಲ ಕಿಡಿಗೇಡಿಗಳು ಕಸದಬುಟ್ಟಿಯನ್ನು ಕಿತ್ತು ಸಮುದ್ರಕ್ಕೆ ಎಸೆದು ಅನಾಗರಿಕ ಕಾರ್ಯ ಎಸೆಗಿದೆ. ಈ ಬಗ್ಗೆ ಗೀತಾನಂದ ಫೌಂಡೇಶನ್ ಸೇರಿದಂತೆ, ಪರಿಸರದ ಸಂಘಟನೆಗಳು ಖಂಡಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿವೆ.

ಕೋಟ ಮಣೂರು ಪಡುಕರೆ ಬೀಚ್ ಅಲ್ಲಿ ಪ್ರವಾಸಿ ಬೀಚ್ ಆಗಿಸಲು ಗೀತಾನಂದ ನಿರಂತರವಾಗಿ ಸ್ವಚ್ಛತೆ, ಅಲ್ಲಿ ಅನುಕೂಲಕರ ವಾತಾವರಣಕ್ಕಾಗಿ ಬೆಂಚ್, ಕಸದ ತೊಟ್ಟಿ ಮೊದಲಾದ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ ಇದೀಗ ಈ ಕೃತ್ಯದಿಂದ ಬೇಸರ ಹೊರಹಾಕಿದ್ದು ಅಭಿವೃದ್ಧಿಗೆ ಹಿನ್ನಡೆಯಾಗುವ ಭೀತಿ ಕೂಡಾ ಎದುರಾಗಿದೆ. ಸಮುದ್ರ ತೀರದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಒಂದೆಡೆಯಾದರೆ ಬೀಚ್ನಲ್ಲಿ ಕುಳಿತ ಗುಂಡು ಪಾರ್ಟಿ ಮಾಡಿ ಅಲ್ಲಲ್ಲಿ ಮಲಿನಗೊಳಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ಹೀಗಾದರೆ ಪ್ರವಾಸಿಗರು ಬೀಚ್ ಆಸುಪಾಸು ಸಂಚರಿಸುವುದಕ್ಕೆ ಕ್ಲಿಷ್ಟಕರ ಸಮಸ್ಯೆ ಎದುರಿಸಬೇಕಾದ ಸ್ಥಿತಿ ಇದ್ದು, ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ ಹೆಚ್ಚಿನ ಆಸಕ್ತಿ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
