ಕುಂದಾಪುರ: ಅನಾಥವಾಗಿ ನಿಂತ ಕಾರು! ಸ್ಥಳೀಯರಿಗೆ ಆತಂಕ – ಕ್ರಮಕ್ಕೆ ಆಗ್ರಹ
ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರದ ಮುಖ್ಯರಸ್ತೆಯ ಪಕ್ಕದಲ್ಲಿ ಕೆಲ ದಿನಗಳಿಂದ ಕಾರೊಂದು ಅನಾಥವಾಗಿ ನಿಂತಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನ ಹಾಗೂ ವದಂತಿಗಳಿಗೆ ಕಾರಣವಾಗಿದೆ.

KA 19 P 1165 ನೋಂದಣಿ ಮಾರುತಿ ಆಲ್ಟೋ ಕಾರೊಂದು ಧೂಳು ತುಂಬಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೇಲ್ನೋಟಕ್ಕೆ ಕಾರನ್ನು ನಿಲ್ಲಿಸಿ ಕನಿಷ್ಟ ಐದಾರು ದುನಗಳಾದರೂ ಆಗಿರಬಹುದು ಎಂದು ಅಂದಾಜಿಸಬಹುದಾಗಿದೆ. ಇದೀಗ ಬೆಳಿಗ್ಗೆ ಸಾರ್ವಜನಿಕರು ಈ ಕಾರನ್ನು ಗಮನಿಸಿದ್ದು, ಸುತ್ತಮುತ್ತಲಿನ ಜನರಿಗೆ ಅನಾಥ ಕಾರಿನ ಸುದ್ಧಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದರಿಂದಾಗಿ ಗ್ರಾಮಸ್ಥರಲ್ಲಿ ಹಲವು ಆತಂಕ ಮತ್ತು ಅನುಮಾನಗಳು ಆರಂಭಗೊಂಡಿವೆ.
ಕಾರನ್ನು ತರಾತುರಿಯಲ್ಲಿ ನಿಲ್ಲಿಸಿ ಬೇರೆಡೆಗೆ ಹೊರಟಿದ್ದಾರೋ ಅಥವಾ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕಾರನ್ನು ನಡುರಾತ್ರಿ ಬಿಟ್ಟು ಹೋಗಿದ್ದಾರೆಯೋ ಅಥವಾ ಕೆಟ್ಟು ನಿಂತ ಕಾರಣಕ್ಕೆ ಕಾರನ್ನು ಯಾರಾದರೂ ಬಿಟ್ಟು ಹೋಗಿದ್ದಾರೋ ಪೊಲಿಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

