ಮಣಿಪಾಲ: ಅಂತರ್-ರಾಜ್ಯ ಟ್ಯಾಟೂ – 313 ಗ್ಯಾಂಗ್ ಭೇದಿಸಿದ ಮಣಿಪಾಲ ಪೊಲೀಸರು – ಇಬ್ಬರು ಅರೋಪಿಗಳ ಸಹಿತ ರೂ.7,90,000 ಮೌಲ್ಯದ ಚಿನ್ನಾಭರಣಗಳ ವಶ
ಮಣಿಪಾಲ: ಇಲ್ಲಿನ ಹಲವು ಮನೆಗಳ ಬಾಗಿಲು ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚುತ್ತಿದ್ದ ಅಂತರ್-ರಾಜ್ಯ ಟ್ಯಾಟೂ – 313 ಗ್ಯಾಂಗ್ ನ ಇಬ್ಬರು ಕಳ್ಳರನ್ನು ಮಣಿಪಾಲ ಪೋಲೀಸರು ಬಂಧಿಸಿದ್ದು ರೂ.7,90,000 ಮೌಲ್ಯದ ಚಿನ್ನಾಭರಣಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರಿನ ಸಿಂಗಸಂದ್ರ ವಾರ್ಡ್ನ 7 ಕ್ರಾಸ್ ರಾಘವೇಂದ್ರ ಲೇಔಟ್ ನ ನಿವಾಸಿ ದಿ .ರವಿ ಎಂಬುವರ ಮಗ ದರ್ಶನ್ ಆರ್ (21) ಹಾಗೂ ದಾವಣಗೆರೆ ಜಿಲ್ಲೆ ಬಸವನಹಾಳ ಅಂಚೆ ಬಸವನಹಾಳ ಗೊಲ್ಲರಹಟ್ಟಿ ದಿ. ಭೀಮಾನಾಯ್ಕನ ಮಗ ಚಂದ್ರು (26) ಎಂದು ಗುರುತಿಸಲಾಗಿದೆ. ಬಂಧಿತರಿಂದ 39.70 ಗ್ರಾಂ ತೂಕದ ಅಂದಾಜು ರೂ 5,06,000 ಮೌಲ್ಯದ ಚಿನ್ನದ ಕರಿಮಣಿ ಸರ, ಅಂದಾಜು ರೂ. 1,86,000 ಮೌಲ್ಯದ 13.30 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 44,000 ಮೌಲ್ಯದ 3.15 ಗ್ರಾಂ ತೂಕದ ಚಿನ್ನದ ಕಿವಿಯೋಲೆ, 54,000 ಮೌಲ್ಯದ 3.87 ಗ್ರಾಂ ತೂಕದ ಚಿನ್ನದ ಚೈನ್ ಸೇರಿದಂತೆ 60 ಗ್ರಾಂ ತೂಕದ ಒಟ್ಟು 790000 ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 02 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೆಬ್ರುವರಿ ಮೂರರಂದು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ಎಂಬಲ್ಲಿ ಅಮಿತ ಡ್ಯಾನಿಯಲ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಳ್ಳತನ ನಡೆಸಲಾಗಿದ್ದು, , ಶಿವಳ್ಳಿ ಗ್ರಾಮ ಇವರು ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು, ಮನೆಯಲ್ಲಿದ್ದ 75 ಗ್ರಾಂ ತೂಕದ ಸುಮಾರು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಇದೇ ರೀತಿ ಸುಮಾರು ಆರೇಳು ಮನೆಗಳಿಗೆ ನುಗ್ಗಿದ್ದ ಟ್ಯಾಟೂ – 313 ಗ್ಯಾಂಗ್ ಕಳ್ಳತನ ನಡೆಸಿ ಪರಾರಿಯಾಗಿತ್ತು.
ಬಳಿಕ ಜೂನ್ ಆರರಂದು ಪೊಲೀಸರು ರಾತ್ರಿ ರೌಂಡ್ಸ್ ನಲ್ಲಿದ್ದಾಗ ಆರೋಪಿಗಳಿಬ್ಬರು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಗೋಡಾನ್ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ರೈಲ್ವೆ ಹಳಿ ಹತ್ತಿರದ ಬೀಗ ಹಾಕಿದ ಮನೆಗಳ ಬಾಗಿಲು ಮುರಿದು ಒಳ ಪ್ರವೇಶಿಸಿ ಕಳ್ಳತನ ಮಾಡಿರುವುದಾಗಿ ಹಾಗೂ ಈಗ ಕೂಡ ಅದೇ ಪರಿಸರದಲ್ಲಿ ಕಳ್ಳತನ ಮಾಡಲು ಹೊರಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದೇ ಸಂದರ್ಭ ಮನೆಗಳ ಬಾಗಿಲು ಮುರಿಯಲು ತಂದ ಕೈಯಲ್ಲಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಕೈಗಳಿಗೆ TATTO 313 ಎಂಬ ಹಚ್ಚೆ ಹಾಕಿಕೊಂಡು TATTO 313 ಗ್ಯಾಂಗ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದು, ಕರ್ನಾಟಕ ತಮಿಳನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣದ ಹತ್ತಿರವಿರುವ ಮನೆಗಳನ್ನು ಗುರಿಯಾಗಿರಿಸಿ ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೈಗಳಿಗೆ ಗ್ಲೌಸ್ , ಕಾಲಿಗೆ ಸಾಕ್ಸ್ ಗಳನ್ನು ಹಾಕಿ ಕಬ್ಬಿಣದ ಆಯುಧಗಳ ಮೂಲಕ ಹಾಕಿದ ಮನೆಗಳನ್ನು ಕಳ್ಳತನ ಮಾಡುವ ಪ್ರವೃತ್ತಿ ಹೊಂದಿರುವುದು ತಿಳಿದು ಬಂದಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.
