ಶೃಂಗೇರಿ ಹೈಡ್ರಾಮಾ: ಜೀವರಾಜ್ ಬಹಿರಂಗ ಕ್ಷಮೆ ಯಾಚಿಸಲಿ – ನಾಗೇಂದ್ರ ಪುತ್ರನ್
ಕೋಟ: ಸ್ವಯಂಘೋಷಿತ ಶಾಸಕ ಎನ್ನಿಸಿಕೊಂಡು ಹೈಡ್ರಾಮಾ ಸೃಷ್ಟಿಸಿದ್ದಲ್ಲದೇ ತನ್ನದೇ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಜನರ ದಿಕ್ಕು ತಪ್ಪಿಸಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ. ಎನ್ ಜೀವರಾಜ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ನಾಗೇಂದ್ರ ಪುತ್ರನ್ ಅವರು, ಬಿಜೆಪಿ ಪರಾಜಿತ ಅಭ್ಯರ್ಥಿ ಡಿ. ಎನ್. ಜೀವರಾಜ್ ಚುನಾವಾಣಾ ಆಯೋಗ ಹಾಗೂ ಜಿಲ್ಲಾಡಳಿತದ ಮೇಲೆ ಒತ್ತಡ ತಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಮರು ಎಣಿಕೆ ನಡೆಸಿದ್ದಲ್ಲದೇ, ಕ್ಷೇತ್ರದ ಮತದಾರರ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವಾರ್ಥ ರಾಜಕಾರಣದ ಅಧಿಕಾರಕ್ಕೋಸ್ಕರ ಈ ರೀತಿ ಕರ್ನಾಟಕ ರಾಜಕೀಯದಲ್ಲಿ ಯಾರೂ ಯಾವತ್ತೂ ಮಾಡಿಲ್ಲ ಎಂದಿರುವ ಪುತ್ರನ್, ಜೀವರಾಜ್ ಅವರನ್ನು ಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಲ್ಲದೇ ಯಾವುದೇ ಪೂರ್ವಾಪರ ಯೋಚಿಸದೇ ಜೀವರಾಜ್ ನನ್ನ ಸ್ನೇಹಿತ ಎಂದಿರುವ ಸಂಸದರು ಮುಂದಿನ ದಿನಗಳಲ್ಲಿ ಇಂತಹಾ ಹೇಳಿಕೆಗಳನ್ನು ನೀಡುವ ಮೊದಲು ವಾಸ್ತವವನ್ನು ಅರಿತುಕೊಳ್ಳಬೇಕು ಎಂದಿದ್ದಾರೆ.
