ಕೋಟೇಶ್ವರದಲ್ಲಿ ಬೈಕಿಗೆ ಲಾರಿ ಡಿಕ್ಕಿ – ಹಾವೇರಿ ಮೂಲದ ಕಾರ್ಮಿಕ ಸ್ಥಳದಲ್ಲಿಯೇ ಸಾವು
ಕುಂದಾಪುರ: ಇಲ್ಲಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀಜಾಡಿ ಎಂಬಲ್ಲಿ ಬೈಕ್ ಹಾಗೂ ಲಾರಿ ನಡುವಿನ ರಸ್ತೆ ಅಪಘಾತದಲ್ಲಿ ಬೈಕ್ ಸವಾರ, ಹಾವೇರಿ ಮೂಲದ ಕೂಲಿ ಕಾರ್ಮಿಕ ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಕಾರ್ಮಿಕನನ್ನು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ನಿವಾಸಿ ಪರಸಪ್ಪ ಚಂದಪ್ಪ ಲಮಾಣಿ (40) ಎಂದು ಗುರುತಿಸಲಾಗಿದೆ.

vasthava.com
ಪರಸಪ್ಪ ಯಾನೇ ಪರಶು ಎಂಬುವರು ತನ್ನ ಪತ್ನಿಯೊಂದಿಗೆ ಕೇರಳದ ಕಾಸರಗೋಡು ತಾಲೂಕಿನ ಉಪ್ಪಳದಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮಂಗಳವಾರ ತನ್ನ ೂರಾದ ಹೆಸರೂರಿನಲ್ಲಿ ಸಂಬಂಧಿಕ ಯುವಕನೊಬ್ಬ ಸಾವನ್ನಪ್ಪಿದ ಸುದ್ಧಿ ಕೇಳಿದ ಪರಸಪ್ಪ ಯಾನೇ ಪರಶು ಉಪ್ಪಳದಿಂದ ಹಾವೇರಿಗೆ ಹೊರಟಿದ್ದರು. ಆದರೆ ಊರಿಗೆ ಬಸ್ ಸಿಗುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಪರಶು ತನ್ನ ಬೈಕಿನಲ್ಲಿಯೇ ಊರಿಗೆ ಹೊರಟಿದ್ದರು.



ಪರಶು ಬೈಕಿನಲ್ಲಿ ಮಂಗಳೂರು ಕುಮುಟಾ ಮಾರ್ಗವಾಗಿ ಹಾವೇರಿಗೆ ಹೊರಟಿದ್ದರು. ಮಂಗಳವಾರ ತಡರಾತ್ರಿ ಸುಮಾರು 12.50ಕ್ಕೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದಾಗ ಬೀಜಾಡಿ ಎಂಬಲ್ಲಿ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಸ್ತೆಗೆಸೆಯಲ್ಪಟ್ಟ ಪರಶು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. ಪರಶು ಅವರ ಮೃತದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
