ಕುಂದಾಪುರ: ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ – ಕೆಸರುಗದ್ದೆಯಲ್ಲೊಂದು ದಿನ

ಕುಂದಾಪುರ : ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 4 ವತಿಯಿಂದ ಶನಿವಾರ ಹುಣ್ಸೆಮಕ್ಕಿಯ ವಸಂತಿ ಶೆಟ್ಟಿ ಮತ್ತು ಸಬ್ಲಾಡಿ ಮಂಜಯ್ಯ ಶೆಟ್ಟಿ ದಂಪತಿಯ ಮನೆಯ ಆವರಣದಲ್ಲಿ ಶಿಬಿರಾರ್ಥಿಗಳಿಗಾಗಿ ಕೆಸರು ಗದ್ದೆಯಲ್ಲೊಂದಿನ ಕಾರ್ಯಕ್ರಮ ಜರಗಿತು.

ಕೆಸರುಗದ್ದೆಗೆ ಹಾಲೆರದು ಪೂಜಿಸಿ, ಕೆಸರುಗದ್ದೆ ಆಟೋಟಕ್ಕೆ ಚಾಲನೆ ನೀಡಿ ಮಾತನಾಡಿದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಉಡುಪಿ ಕುಂದಾಪುರ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆ ಯಾವುದಾದರೂ ಇದ್ದಲ್ಲಿ ಅದು ಕುಂದಾಪುರ ಎಜುಕೇಶನ್ ಸೊಸೈಟಿ ಮಾತ್ರ, ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗಬೇಕಾಗಿರುವಂತಹ ಪರಿಸ್ಥಿತಿ ಇರುವಂತಹ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಈ ಸಂಸ್ಥೆಯನ್ನು ಹುಡುಕಿಕೊಂಡು ಬರುವುದು ಈ ಸಂಸ್ಥೆಯ ಗುಣಮಟ್ಟಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಇಂತಹ ಬೇಸಿಗೆ ಶಿಬಿರಗಳ ಮೂಲಕ ಅನೇಕ ಜೀವನ ಕೌಶಲ್ಯಗಳನ್ನು ಕಲಿತು ಉತ್ತಮ ವ್ಯಕ್ತಿಗಳಾಗಬೇಕು ಎಂದರು.

ಶಿಬಿರಾರ್ಥಿಗಳು ಕೆಸರುಗದ್ದೆಯಲ್ಲಿ ಆಟ, ಓಟ, ಹಗ್ಗ ಜಗ್ಗಾಟ, ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ತದನಂತರ ಹೆಗ್ಡೆ ಹೌಸ್ ನ ಫಾರ್ಮ್ ಹೌಸ್ ಭೇಟಿ ನೀಡಿ ವಿಭಿನ್ನ ತಳಿಯ ದನಗಳನ್ನು ವೀಕ್ಷಿಸುವುದರೊಂದಿಗೆ ದಿನದ ಶಿಬಿರ ಸಂಪನ್ನಗೊಂಡಿತು. ವೀಕ್ಷಕ ವಿವರಣೆಯನ್ನು ಶಿಕ್ಷಕ ರವಿಚಂದ್ರ ನೆರವೇರಿಸಿದರು.

