ಕುಂದಾಪುರ: ಮಹಾತ್ಮರನ್ನು ಹತ್ಯೆ ಮಾಡಬಹುದು, ಆದರೆ ಅವರ ತತ್ವಾದರ್ಶಗಳನ್ನಲ್ಲ – ವರದೇಶ್ ಹಿರೇಗಂಗೆ
ಕುಂದಾಪುರದಲ್ಲಿ ಮಹಾತ್ಮ ಹುತಾತ್ಮ ಸೌಹಾರ್ದ ಕಾರ್ಯಕ್ರಮ
ಕುಂದಾಪುರ: ಪ್ರತಿಯೊಂದು ತತ್ವಗಳಿಗೂ ಪ್ರತಿರೋಧ ಇದ್ದೇ ಇರುತ್ತದೆ.ಅಂತಹಾ ಪ್ರತಿರೋಧಗಳಿಂದಲೇ ಮಹಾತ್ಮಾ ಗಾಂಧೀಯವರ ಹತ್ಯೆ ಮಾಡಲಾಯಿತು. ಮಹಾತ್ಮರನ್ನು ಪ್ರತಿರೋಧಿಗಳು ಹತ್ಯೆ ಮಾಡಿರಬಹುದು ಆದರೆ ಮಹಾತ್ಮರ ತತ್ವಾದರ್ಶಗಳನ್ನು ಹತ್ಯೆ ಮಾಡಲು ಸಾಧ್ಯವೇ ಇಲ್ಲ. ಉತ್ತಮ ಸಂದೇಶಗಳು ಶಾಶ್ವತವಾಗಿರುತ್ತವೆ ಎಂದು ಉಡುಪಿಯ ಗಾಂಧೀ ಪ್ರತಿಷ್ಠಾನದ ವರದೇಶ್ ಹಿರೇಗಂಗೆ ಹೇಳಿದರು.


ಅವರು ಕುಂದಾಪುರದ ಶಾಸ್ತ್ರೀ ಸರ್ಕಲ್ ನಲ್ಲಿ ಶುಕ್ರವಾರ ಅಕ್ಟೋಬರ್ 30, ಹುತಾತ್ಮರ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಮಹಾತ್ಮ ಹುತಾತ್ಮ” ಸೌಹಾರ್ದ ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.

ನಿವೃತ್ತ ಪ್ರಾದ್ಯಾಪಕ ಪ್ರೊ. ಹಯವದನ ಮೂಡುಸಗ್ರಿ ಮಾತನಾಡಿ, ಈ ದೇಶದ ಒಟ್ಟಾರೆ ರಾಜಕಾರಣಿಗಳು ಗಾಂಧಿಯನ್ನು ಮತ್ತು ರಾಮನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇ ಈ ದೇಶದ ಬಹುದೊಡ್ಡ ದುರಂತ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಮಹಾತ್ಮಾ ಗಾಂಧೀಜಿಯ ವಿರೋಧಿಗಳೇ ಈಗ ದೇಶ ಆಳ್ತಾ ಇದ್ದಾರೆ. ಸಂವಿಧಾನದಲ್ಲಿ ಇರುವ ಜಾತ್ಯಾತೀತತೆ ಮತ್ತು ಸಮಾಜವಾದವನ್ನೇ ಕಿತ್ತೆಸೆಯಲು ಹೊರಟಿದ್ದಾರೆ. ಇತ್ತ ದೇಶ ಕಂಡ ಬಡವರ ಪರವಾಗಿದ್ದ ರಾಮನನ್ನು ಶ್ರೀಮಂತ ರಾಮನನ್ನಾಗಿ ಬಿಂಬಿಸಲಾಗುತ್ತಿದೆ. ಇದೆಲ್ಲಾ ಕಾರಣಕ್ಕೆ ನಾವೆಲ್ಲರೂ ಗಾಂಧಿಯನ್ನು ಮತ್ತು ಬಡವರ ಪರವಾಗಿದ್ದ ರಾಮನನ್ನು ಸರಿಯಾದ ದಾರಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಆಶಾ ಕರ್ವಾಲೋ ಮತ್ತು ತಂಡ ರಾಷ್ಟ್ರೀಯ ಗೀತೆಗಳನ್ನು ಹಾಡಿದರು. ವಿವಿಧ ಸಂಘಟನೆಗಳ ಮುಂಡರಾದ ಸುರೇಶ್ ಕಲ್ಲಾಗರ, ಸದಾನಂದ ಬೈಂದೂರು, ಅಬೂ ಮೊಹಮ್ಮದ್, ಹೆಚ್. ನರಸಿಂಹ, ವಿನೋದ್ ಕ್ರಾಸ್ತಾ, ಪಂಜು ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಮೊಬೈಲ್ ಬೆಳಕಿನಲ್ಲಿ ಗಾಂಧೀ ಹಾಡು ಹಾಡಲಾಯಿತು. ಉದಯ ಗಾಂವ್ಕರ್ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು.

