ಬೈಂದೂರು: ನಾಡದಲ್ಲೊಂದು ನಾಡೋತ್ಸವ – ಆರೋಗ್ಯ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮ
ಬೈಂದೂರು : ಜನವರಿ 24, 25 ಮತ್ತು 26 ರಂದು ಬೈಂದೂರಿನಲ್ಲಿ ನಡೆಯಲಿರುವ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪರಿಕಲ್ಪನೆಯ ಬೈಂದೂರು ಉತ್ಸವ -2026 ಇದರ ಅಂಗವಾಗಿ ನಾಡ ಗ್ರಾಮ ಪಂಚಾಯತ್ ಹಾಗೂ ಸರಕಾರಿ, ಖಾಸಗಿ ಸರ್ವ ಇಲಾಖೆಗಳ ಸಹಭಾಗಿತ್ವದಲ್ಲಿ ನಾಡದಲ್ಲೊಂದು ನಾಡೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು.

ನಾಡೋತ್ಸವ ಸಮಿತಿ ಸಂಚಾಲಕ ಸಂಸಾಡಿ ಅಶೋಕ್ ಶೆಟ್ಟಿ ನಾಡ ಅವರು ಉದ್ಘಾಟಿಸಿ ಮಾತನಾಡಿ, ಪ್ರತಿ ಗ್ರಾಮ ಪಂಚಾಯತಿಯಲ್ಲೂ ಗ್ರಾಮೋತ್ಸವ ಆಯೋಜಿಸಿದ್ದು ಇದರ ಮೂಲಕ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಮತ್ತು ಅನುಕೂಲಗಳನ್ನು ನೇರವಾಗಿ ಪಡೆಯುವ ಅವಕಾಶ ದೊರಕಿದಂತಾಗಿದೆ. ಈ ಉತ್ಸವ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಹಾಗೂ ಈ ಉತ್ಸವಗಳು ಮನೋರಂಜನೆಯ ಜೊತೆಗೆ ಬೈಂದೂರು ಅಭಿವೃದ್ಧಿಗೆ ಮುನ್ನುಡಿ ಆಗಲಿ ಎಂದರು.
ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಕ್ಕಾಡಿ ಜಗದೀಶ್ ಪೂಜಾರಿ ಮಾತನಾಡಿ, ನಾಡೋತ್ಸವದಿಂದ ನಾಡದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆಊರ ಜನರು ಅತ್ಯಂತ ಸಂಭ್ರಮ, ಸಹಕಾರ ಹಾಗೂ ಜವಬ್ದಾರಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಒಂದು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಇದೇ ಸಂದರ್ಭ ವಿಶೇಷಚೇತನ ವಿದ್ಯಾರ್ಥಿನಿ ಶ್ರೀರಕ್ಷಾ ಶೆಟ್ಟಿ, ಸಂಗೀತ ಕಲಾವಿದ ಶರತ್ ನಾಡ, ಸ್ವಚ್ಚತಾ ಕಾರ್ಯಕರ್ತರು, ಕೊಗರ ಅಭಿವೃದ್ಧಿ ಸಂಘದ ಅಧ್ಯಕ್ಷೆ ಸುಶೀಲಾ ನಾಡ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಗೋ-ಪೂಜೆ, ಗ್ರಾಮೀಣ ಭಾಗದ ಕೊರಗ ಸಮುದಾಯದ ಡೋಲು ವಾದನ, ಕಂಬಳ ಕೋಣಗಳು, ಸಂಜೀವಿನಿ ಒಕ್ಕೂಟದ ಮಹಿಳೆಯರ ಸ್ವ-ಉದ್ಯೋಗ, ವಿವಿಧ ಇಲಾಖೆಗಳ ಮಾಹಿತಿ ಕಾರ್ಯಗಾರಗಳು ನಡೆದವು. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಬಿಪಿ ಶುಗರ್ ಇತ್ಯಾದಿ ಪರೀಕ್ಷೆ ನಡೆಸಿದರು. ಮಣಿಪಾಲ ಕೆ.ಎಮ್. ಸಿ ಆಸ್ಪತ್ರೆಯ 25 ತಜ್ಞ ವೈದ್ಯರಿಂದ ಮಹಿಳೆಯರ ಗರ್ಭಕಂಠ, ಸ್ಥನ ಹಾಗೂ ಬಾಯಿ ಕ್ಯಾನ್ಸರ್ ತಪಾಸಣೆ ಚರ್ಮರೋಗ ತಪಾಸಣೆ ಮತ್ತು ಚಿಕಿತ್ಸೆ ನಡೆಯಿತು.
ನಾಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರ್ವತಿ ಮೊಗವೀರ ಅವರು ನಾಡೋತ್ಸವ ಅಧ್ಯಕ್ಷತೆ ವಹಿಸಿದ್ದರು. ನಾಡ ಗ್ರಾಮೋತ್ಸವದ ಶರತ್ ಕುಮಾರ್ ಶೆಟ್ಟಿ, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸೊಸೈಟಿ ಅಧ್ಯಕ್ಷ ರಾಜೀವ ಪಡುಕೋಣೆ, ಲಯನ್ಸ್ ಕ್ಲಬ್ ಕುಂದಾಪುರ ಕೊಸ್ಟಲ್ ಅಧ್ಯಕ್ಷ ವಸಂತ್ ರಾಜ್ ಶೆಟ್ಟಿ, ನಾಡ ಶಾಖೆಯ ಬ್ಯಾಂಕ್ ಆಫ್ ಬರೋಡಾ ಶಾಖಾ ಪ್ರಬಂಧಕ ಲಕ್ಷ್ಮೀ ರಮಣ, ಮರವಂತೆ ವಹರಾ ಮಹಾರಾಜಾ ಸ್ವಾಮಿ ದೇವಸ್ಥಾನದ ಮಾಜಿ ಧರ್ಮದರ್ಶಿ ಸತೀಶ್ ನಾಯಕ್ ನಾಡ, ಕೊಸ್ಟಲ್ ಲಯನ್ಸ್ ಕುಂದಾಪುರ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಅಂಪಾರು, ಬೈಂದೂರು ಉತ್ಸವ ಉಪಾಧ್ಯಕ್ಷೆ ಅನಿತಾ ಆರ್. ಕೆ, ಉತ್ಸವ ಸಂಚಾಲಕ ಶ್ರೀಗಣೇಶ್ ಗಾಣಿಗ ಉಪ್ಪುಂದ, ದಲಿತ ಸಂಘರ್ಷ ಸಂಘಟನೆ ಅಧ್ಯಕ್ಷ ಸತೀಶ್ ರಾಮನಗರ, ನಾಡ ಗ್ರಾ. ಪಂ ಉಪಾಧ್ಯಕ್ಷ ಪ್ರಥ್ವಿಶ್ ಕುಮಾರ್ ಶೆಟ್ಟಿ, ನಾಡ ಗ್ರಾಮೋತ್ಸವ ಸದಸ್ಯ ಮಂಜುನಾಥ್ ಪೂಜಾರಿ ಬೆಳ್ಳಾಡಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಪಲ್ಲವಿ ಹಾಗೂ ನಾಡ ಗ್ರಾ. ಪಂ ಸದಸ್ಯರು ಉಪಸ್ಥಿತರಿದ್ದರು.
ನಾಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಮೊಗವೀರ ಸ್ವಾಗತಿಸಿದರು. ಶಂಭು ಗುಡ್ಡೆಯಂಗಡಿ ನಿರೂಪಿಸಿದರು. ವೆಂಕಟರಮಣ ನಾಡ ವಂದಿಸಿದರು.
