ಕುಂದಾಪುರ: ಭೀಕರ ಶಾರ್ಟ್ ಸರ್ಕ್ಯೂಟ್ – ನಾಲ್ಕು ಅಂಗಡಿಗಳು ಧ್ವಂಸ – ಕೋಟ್ಯಾಂತರ ರೂಪಾಯಿ ನಷ್ಟ! ರಥಬೀದಿಯಲ್ಲಿ ಅಗ್ನ್ಯಾವತಾರ – ಬೆಚ್ಚಿಬಿದ್ದ ಕುಂದಾಪುರ!
ಕುಂದಾಪುರ: ಸೋಮವಾರ ನಸುಕಿನ ಜಾವ ಕುಂದಾಪುರದ ಮುಖ್ಯರಸ್ತೆಯಲ್ಲಿರುವ ರಥಬೀದಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ದುರಂತದಲ್ಲಿ ಪಟಾಕಿ, ಪುಸ್ತಕದಂಗಡಿ, ಪೂಜಾ ಸಾಮಾಗ್ರಿಗಳ ಅಂಗಡಿ, ಎಲೆಕ್ಟ್ರಾನಿಕ್ಸ್ ಅಂಗಡಿ ಮೂರು ಅಂಗಡಿಗಳು ಸಂಪೂರಗಣ ಧ್ವಂಸವಾದರೆ, ಮತ್ತೊಂದು ಪೂಜಾ ಸಾಮಗ್ರಿ ಅಂಗಡಿ ಅರ್ಧ ಧ್ವಂಸಗೊಂಡಿದೆ. ಅಗ್ನಿ ಅವಘಡದಿಂದ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


ಕುಂದಾಪುರದ ಪೇಟೆ ಶ್ರೀ ವೇಂಕಟರಮಣ ದೇವಸ್ಥಾನದ ಮುಂಭಾಗದಲ್ಲಿರುವ ರಥಬೀದಿಯಲ್ಲಿ ಪ್ರಸಿದ್ಧ ಪುಸ್ತಕದಂಗಡಿ, ಪಟಾಕಿ ಅಂಗಡಿ, ಪೂಜಾ ಸಾಮಾಗ್ರಿ ಮಾರಾಟದಂಗಡಿಗಳಿವೆ. ಆ ಪೈಕಿ ಒಂದು ಅಂಗಡಿಯ ಮೇಲ್ಭಾಗದಲ್ಲಿ ಸೋಮವಾರ ನಸುಕಿನ ಜಾವ ಸುಮಾರ 3.30 ಗಂಟೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ರಾತ್ರಿ ಕಾವಲುಗಾರ ಸ್ಥಳೀಯರೊಬ್ಬರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರು ಕೆಲಸಕ್ಕೆ ಹೋಗುತ್ತಿದ್ದ ಖಾರ್ವಿ ಯುವಕರನ್ನು ನಿಲ್ಲಿಸಿ ಮಾಹಿತಿ ನೀಡಿದ್ದು ಪೊಲೀಸರಿಗೆ ಮಾಹಿತಿ ನೀಡಿ, ಅಗ್ನಿಶಾಮಕ ದಳಕ್ಕೆ ಕರೆಸುವಂತೆ ಕೋರಿದ್ದಾರೆ. ಅದರಂತೆ ಖಾರ್ವಿ ಯುವಕರು ಮಾಹಿತಿ ನೀಡಿದ್ದಾರೆ. ಇತ್ತ ಇವರು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.


ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ಅರ್ಧ ಘಂಟೆ ಸಮಯದಲ್ಲಿ ಅಂಗಡಿಗಳು ಬಹುತೇಕ ಹೊತ್ತಿ ಉರಿದಿವೆ. ಸಾಲಾಗಿ ಇದ್ದ ಲಲಿತ್ ನಾಥ್ ಭಟ್ ಮಾಲೀಕತ್ವದ ದಾಮೋದರ್ಪ್ರಾವಿಜನ್ ಸ್ಟೋರ್ ಹೆಸರಿನ ಪೂಜಾ ಸಾಮಾಗ್ರಿಗಳ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. ಶಿವಾನಂದ ಭಟ್ ಸಹೋದರರು ನಡೆಸುತ್ತಿರುವ ಜನಾರ್ಧನ ಭಟ್ ಎಂಡ್ ಸನ್ಸ್ ಎಂಬ ಪಟಾಕಿ ಅಂಗಡಿ, ಪುಸ್ತಕದ ಅಂಗಡಿಯೂ ಸರ್ವನಾಶವಾಗಿದೆ. ದಿವಾಕರ ಭಟ್ ಮಾಲೀಕತ್ವದ ಮಥುರಾ ಎಲೆಕ್ಟ್ರಾನಿಕ್ಸ್ ಸುಟ್ಟು ಹೋಗಿದ್ದು, ನಷ್ಟ ಅಂದಾಜಿಗೆ ಸಿಕ್ಕಿಲ್ಲ.


ಗಣಪತಿ ನಾಯಕ್ ಮಾಲೀಕತ್ವದ ಬಾಲಾಜಿ ಪ್ರಾವಿಜನ್ ಸ್ಟೋರ್ ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪೂಜಾ ಸಾಮಾಗ್ರಿಗಳಿದ್ದು, ಮೇಲಿನ ಮಹಡಿ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕದಳದ ಕಾರ್ಯಾಚರಣೆಯಿಂದ ಕೆಳಗಿನ ಕೋಣೆ ಉಳಿದುಕೊಂಡಿದೆ.


ಘಟನಾ ಸ್ಥಳದಲ್ಲಿ ಐದು ಅಗ್ನಿಶಾಮಕದ ದಳ ಕಾರ್ಯಾಚರಣೆ ನಡೆಸುತ್ತಿದ್ದು, ಅಗ್ನಿಶಾಮಕದಳದ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಕುಂದಾಪುರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
