ಜನರ ಜೀವ ಹಿಂಡಬೇಡಿ, ಅಧಿಕಾರ ಕಳೆದುಕೊಳ್ಳುತ್ತೀರಿ – ಶಾಸಕ ಯಶ್ಪಾಲ್ ಗೆ ನಾಗೇಂದ್ರ ಪುತ್ರನ್ ಎಚ್ಚರಿಕೆ
ಉಡುಪಿ: ಜನಪ್ರತಿನಿಧಿಯಾದವರು ಜನಹಿತ ಕಾಪಾಡಬೇಕು. ಅದು ಬಿಟ್ಟು ಜನರ ಜೀವ ಹಿಂಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಅವರು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶಾಸಕರಾಗಿರುವ ಯಶ್ಪಾಲ್ ಸುವರ್ಣ ಒಂದು ಖಾಸಗಿ ಬ್ಯಾಂಕಿನ ಅಧ್ಯಕ್ಷರಾಗಿದ್ದುಕೊಂಡು ಕ್ಷೇತ್ರದ ಮತದಾರರಿಗೆ ಮಾನಸಿಕ ಮಾತ್ತು ಕಾನೂನು ಹಿಂಸೆ ನೀಡುತ್ತಿರುವುದು ಸರಿಯಲ್ಲ ಎಂದಿದ್ದಾರೆ. ನಿಮ್ಮ ಕ್ಷೇತ್ರದ ಮತದಾರರು ಈ ಸಂದೀಗ್ದ ಪರಿಸ್ಥಿತಿಗೆ ಬರುವಂತೆ ಮಾಡಿದ್ದು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಅವರು, ನೀವು ಬರಿ ಜನಪ್ರತಿನಿಧಿ ಅಲ್ಲ, ಯಾರೋ ಕಟ್ಟಿದ ಬ್ಯಾಂಕಿನ ಅಧ್ಯಕ್ಷರು ಕೂಡ. ಯಾರೋ ಮಾಡಿದ ತಪ್ಪಿಗೆ ಬಡವರಿಗೆ ಶಿಕ್ಷೆ ಕೊಡ್ಬೇಡಿ, ಕೋರ್ಟ್ ಕಚೇರಿಗೆ ಹೋಗುವ ಪರಿಸ್ಥಿತಿ ಅವರಲ್ಲಿ ಇಲ್ಲ. ಬ್ಯಾಂಕಿನ ಅಧ್ಯಕ್ಷರೂ ನೀವೇ ಆಗಿರುವುದರಿಂದ ನಿಮ್ಮ ತಪ್ಪಿನ ಅರಿವು ಮಾಡಿಕೊಂಡು ನ್ಯಾಯ ಕೊಡಿಸಿ ಎಂದು ಕೃತಜ್ಞತೆ ಪೂರ್ವಕವಾಗಿ ವಿನಂತಿ ಮಾಡ್ತೇನೆ ಎಂದಿದ್ದಾರೆ.
ನನ್ನ ಸಮುದಾಯದ ನಾಯಕರೂ ಆಗಿರುವುದರಿಂದ ವಿನಮ್ರ ವಿನಂತಿ ಮಾಡುತ್ತೇನೆ. ದಯವಿಟ್ಟು ಸಮಸ್ಯೆ ಬಗೆಹರಿಸಿ. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಕಾರಣವಾಗುತ್ತದೆ. ಅದಕ್ಕೆ ಶಾಸಕರು ಅವಕಾಶ ಮಾಡಿಕೊಡಬಾರದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಶಾಸಕರು ಹತ್ತಿದ ಮೆಟ್ಟಿಲು ಮರೆತು ಕ್ಷೇತ್ರದ ಮತದಾರರ ವಿರುದ್ಧ ಹೋದರೆ ಮುಂದಿನ ರಾಜಕೀಯ ಭವಿಷ್ಯ ನಿರ್ನಾಮವಾಗುವುದು ಖಂಡಿತ ಎಂದು ನಾಗೇಂದ್ರ ಪುತ್ರನ್ ಎಚ್ಚರಿಸಿದ್ದಾರೆ.
