ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರರಿಗೆ ಒಲಿದುಬಂದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ.
ನವೆಂಬರ್ 16ರಂದು ಪ್ರಶಸ್ತಿ ಪ್ರದಾನ. ಅಶಕ್ತ, ಅನಾರೋಗ್ಯ ಪೀಡಿತರಿಗೆ ನೆರವು, ಸಾಂಸ್ಕೃತಿಕ ಕಾರ್ಯಕ್ರಮ
ಕುಂದಾಪುರ: ಕೋಟದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯು ಈ ಬಾರಿ ದಿಟ್ಟ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರಿಗೆ ಒಲಿದು ಬಂದಿದೆ. ಪಂಚವರ್ಣ ಯುವಕ ಮಂಡಲದ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇದೇ ನವೆಂಬರ್ 16 ರಂದು ಸಂಜೆ ಕೋಟದ ಗಾಂಧಿ ಮೈದಾನದಲ್ಲಿ ಜರಗಲಿರುವ ಕನ್ನಡ ರಾಜ್ಯೋತ್ಸವ ಸದ್ಭಾವನಾ 2025ರ ನಾಡುನುಡಿಗೆ ಭಾವ ನಮನ, ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

ಬೆಂಗಳೂರು ಸಿ.ಎ ಸಂಸ್ಥೆ ಕ್ಯಾಪ್ಸ್ ಫೌಂಡೇಶನ್ ಮುಖ್ಯಸ್ಥ ಸಿ.ಎ ಚಂದ್ರಶೇಖರ ಶೆಟ್ಟಿ ಪಾಲ್ಗೊಳ್ಳಲಿದ್ದು, ಸಮಾಜಸೇವಕ ಆನಂದ್ ಸಿ ಕುಂದರ್ ಉದ್ಘಾಟಿಸಲಿದ್ದಾರೆ. ವಿಶ್ವವಿಖ್ಯಾತ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಇವರಿಗೆ ವಿಶೇಷ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ವಿಶೇಷ ಅಭಿನಂದನೆ, ಮಾಸ್ಟರ್ ಅಥ್ಲೆಟಿಕ್ ಪಟು ಅಶ್ವಿನಿ ಅರಳರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿದೆ. ಉಡುಪಿಯ ಹೊಸಬದುಕು ಆಶ್ರಮಕ್ಕೆ ಪರಿಕರ, ಅಶಕ್ತ ಅನಾರೋಗ್ಯ ಪೀಡಿತರಿಗೆ ಬನ್ನಾಡಿ ಪದ್ದು ಆಚಾರ್ಯ ಸ್ಮರಣಾರ್ಥ ಆರೋಗ್ಯ ನಿಧಿ ವಿತರಣೆ, ಸಂತೋಷ್ ಕುಮಾರ್ ವಿದ್ಯಾನಿಧಿ ವಿತರಣೆ, ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳಿಗೆ ದತ್ತಿನಿಧಿ, ಅಂಗನವಾಡಿ ಶಾಲೆಗಳಿಗೆ ವಿವಿಧ ಪರಿಕರ ಹಸ್ತಾಂತರ ನಡೆಯಲಿದೆ.

ಸ್ಥಳೀಯ ಕೋಟತಟ್ಟು ಕಲ್ಮಾಡಿ ಮಣೂರು ಕಾಸನಗುಂದು ಅಂಗನವಾಡಿ ಪುಟಾಣಿಗಳಿಂದ ನೃತ್ಯ ಸಿಂಚನ, ಪಂಚವರ್ಣ ಮಹಿಳಾ ಮಂಡಲ ಮಹಿಳೆಯರಿಂದ ಯಕ್ಷ ನೃತ್ಯ ಹಾಗೂ ಕುಂಭಾಶಿಯ ಮಯೂರಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಲರವ ರಾತ್ರಿ 9ಕ್ಕೆ ಮಂಗಳೂರಿನ ಪ್ರಸಿದ್ಧ ನಾಟಕ ತಂಡದ ಚಾಪರ್ಕ ಕಲಾವಿದರಿಂದ ಯಾರೂ ಗ್ಯಾರಂಟಿ ಅಲ್ಲ ನಾಟಕ ಪ್ರದರ್ಶನ ನಡೆಯಲಿದೆ ಎಂದು ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಹಾಗೂ ಅಧ್ಯಕ್ಷ ಮನೋಹರ್ ಪೂಜಾರಿ ಹೇಳಿದ್ದಾರೆ.
