ಕೋಟ: ಪಂಚವರ್ಣದಿಂದ ನಾಲ್ಕನೇ ವರ್ಷದ ಸಾಮೂಹಿಕ ಗೋ ಪೂಜೆ
ಗೋ ಮಾತೆ ತಾಯಿ ಸ್ವರೂಪಿಣಿ – ಪತ್ರಕರ್ತ ಚಂದ್ರಶೇಖರ ಬೀಜಾಡಿ
ಕೋಟ: ಗೋ ಪೂಜೆಯ ಮಹತ್ವ ಅರಿತು ಅದರ ಕೈಂಕರ್ಯದಲ್ಲಿ ಭಾಗಿಯಾಗುವುದೇ ಸೌಭಾಗ್ಯ ಎಂದು ಪತ್ರಕರ್ತ ಚಂದ್ರಶೇಖರ ಬೀಜಾಡಿ ಹೇಳಿದರು. ಅವರು ಬೀಜಾಡಿಯ ಕಪಿಲೆ ಗೋ ಶಾಲೆಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟೇಶ್ವರ ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಾಲ್ಕನೆ ವರ್ಷದ ಸಾಮೂಹಿಕ ಗೋ ಪೂಜಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಬೀಜಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಉದ್ಘಾಟಿಸಿ ಶುಭಹಾರೈಸಿದರು. ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ ಹಾಗೂ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಗೋ ಗ್ರಾಸ ನೀಡುವ ಮೂಲಕ ಗೋ ಪೂಜೆಯ ಮಹತ್ವ ಹೆಚ್ಚಿಸಿದರು.

ಪಂಚವರ್ಣ ಮಹಿಳಾ ಮಂಡಲ ಹಾಗೂ ಮೊಗವೀರ ಮಹಿಳಾ ಘಟಕದ ಮಹಿಳೆಯರು ಗೋವಿಗೆ ವಿಶೇಷವಾಗಿ ಸಾಂಪ್ರದಾಯಿಕ ಆಹಾರ ನೀಡಿದರು.

ಈ ಸಂದರ್ಭದಲ್ಲಿ ಕಪಿಲೆ ಗೋ ಶಾಲೆಯ ಮುಖ್ಯಸ್ಥ ಕುಮಾರ್, ಮೊಗವೀರ ಯುವ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅಶೋಕ್ ತೆಕಟ್ಟೆ , ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಆನಂದ್ ಕುಂದರ್, ಮಾಜಿ ಅಧ್ಯಕ್ಷ ಸುನಿಲ್ ನಾಯ್ಕ್,ನಾಗರಾಜ್ ಬೀಜಾಡಿ, ಗುರಿಕಾರರಾದ ರಾಮಣ್ಣ , ಪಂಚವರ್ಣದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತ ಪೂಜಾರಿ, ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ನಾಗರಾಜ್ ಶೆಟ್ಟಿ, ರಾಷ್ಟ್ರೀಯ ಮಾನವಹಕ್ಕು ರಾಜ್ಯ ಸಮಿತಿಯ ಪ್ರದಾನ ಕಾರ್ಯದರ್ಶಿ ಕೋಟ ದಿನೇಶ್ ಗಾಣಿಗ ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಮೊಗವೀರ ಮಹಿಳಾ ಘಟಕದ ಗಾಯಿತ್ರಿ ವಂದಿಸಿದರು, ಪತ್ರಕರ್ತ ರವೀಂದ್ರ ಕೋಟ ಸಂಯೋಜಿಸಿದ್ದರು.
