ಸಿದ್ಧಾಪುರ: ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆದಾಗ ಉತ್ತಮ ಪ್ರಜೆಯಾಗಲು ಸಾಧ್ಯ – ಜ್ಞಾನ ಸರಸ್ವತಿ ಪಿಯು ಕಾಲೇಜು ಆರಂಭೋತ್ಸವ



ಕುಂದಾಪುರ: ಶಿಕ್ಷಣ ಕೇವಲ ಅಂಕಗಳಿಕೆಯ ಸಾಧನವಾದರೆ ನಮ್ಮ ಸಂಸ್ಕೃತಿ, ಸಂಸ್ಕಾರಗಳು ನಮ್ಮನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯುತ್ತವೆ. ಹಾಗಾಗಿ ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸುವ ಸಂಕಲ್ಪ ಹೊಂದಿರುವ ಸಿದ್ಧಾಪುರದ ಜ್ಞಾನಸರಸ್ವತಿ ಪಿಯು. ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಸುಮುಖ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಸಿದ್ದಾಪುರದ ವಿದ್ಯಾನಗರದಲ್ಲಿ ನೂತನವಾಗಿ ಆರಂಭಗೊಂಡ ಜ್ಞಾನಸರಸ್ವತಿ ಪಿಯು ಕಾಲೇಜಿನ ಪ್ರಥಮ ಪಿಯುಸಿ ತರಗತಿಯ ಆರಂಭೊತ್ಸವ “ಶ್ರೀಕಾರ” ಉದ್ಘಾಟಿಸಿ ಮಾತನಾಡಿದರು.

















ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಮುಖ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಹಾಗೂ ಜ್ಞಾನಸರಸ್ವತಿ ಪಿಯು ಕಾಲೇಜಿನ ಸಂಸ್ಥಾಪಕ ಸುರೇಶ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆ ಕಟ್ಟುವ ಬಾಲ್ಯದ ಕನಸು ನನಸಾಗಿದೆ. ಇದಕ್ಕೆ ಸಹಕಾರ ನೀಡಿದವರು 25 ವರ್ಷ ಪೂರೈಸಿರುವ ಸಿದ್ದಾಪುರ ಸರಸ್ವತಿ ವಿದ್ಯಾಲಯ. ಈಗ ಸರಸ್ವತಿ ವಿದ್ಯಾಲಯವು ಹೊಸ ಆಡಳಿತ ಮಂಡಳಿಯೊಂದಿಗೆ ಜ್ಞಾನಸರಸ್ವತಿ ಪಿಯು ಕಾಲೇಜು ಆರಂಭಗೊಂಡಿದೆ. ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯ ವಿದ್ಯಾರ್ಥಿಯನ್ನಾಗಿ ಮಾಡುವುದೇ ಈ ಕಾಲೇಜಿನ ಉದ್ದೇಶ ಎಂದರು.








ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಮಾತನಾಡಿ, ಶಿಕ್ಷಣ ಸಂಸ್ಥೆ ಸರ್ವ ಜನಾಂಗದ ಶಾಂತಿಯ ತೋಟ. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಣ ಸಂಸ್ಥೆಯಿಂದ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯ ಎಂದರು. ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ಶ್ರೀಲತಾ ಶೆಟ್ಟಿ ಕಡ್ರಿ, ಸುಮುಖ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಡಿ. ಗೋಪಾಲಕೃಷ್ಣ ಕಾಮತ್, ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಮೊದಲಾದವರು ಉಪಸ್ಥಿತರಿದ್ದರು.






ಜ್ಞಾನಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಸ್ವಾಗತಿಸಿ, ಪ್ರಾಸ್ತವಿಸಿದರು. ಉಪನ್ಯಾಸಕರಾದ ಜಿ. ನಾಗರಾಜ ಮತ್ತು ಸಿ.ಪಿ ಮಂಜುನಾಥ ನಿರೂಪಿಸಿದರು. ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ಆಜ್ರಿ ವಂದಿಸಿದರು.