ಜೂನ್ 17: ಕುಂದಾಪುರ ಬಿಲ್ಲವ ಸಂಘದಿಂದ ದಿ. ಸುರೇಶ ಎಸ್. ಪೂಜಾರಿ ಪಡುಕೋಣೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಕುಂದಾಪುರ: ಮುಂಬೈನ ಸ್ವಗೃಹಲ್ಲಿ ಜೂನ್ 4ರಂದು ನಿಧನರಾದ, ಉದ್ಯಮಿ, ಕೊಡುಗೈ ದಾನಿಗಳಾಗಿದ್ದ ಸುರೇಶ ಎಸ್. ಪೂಜಾರಿ ಪಡುಕೋಣೆ (86 ವರ್ಷ) ಅವರ ಸಂಸ್ಮರಣೆ ಮತ್ತು ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಜೂನ್ 17ರಂದು ಮಂಗಳವಾರ ಬೆಳಿಗ್ಗೆ ಗಂಟೆ 10 ಗಂಟೆಗೆ ಕುಂದಾಪುರದ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬೀಜಾಡಿ ಅಶೋಕ್ ಪೂಜಾರಿ ತಿಳಿಸಿದ್ದಾರೆ.
ಬಾಲ್ಯದಲ್ಲಿಯೇ ಹುಟ್ಟೂರನ್ನು ತೊರೆದ ಸುರೇಶ ಎಸ್. ಪೂಜಾರಿ ಪಡುಕೋಣೆ ತಮ್ಮ ಕುಟುಂಬದ ಪಾಲನೆಗೆ ದೂರದ ಮಾಯಾನಗರಿ ಮುಂಬಯಿಗೆ ತೆರಳಿ ಸುಖ ಸಾಗರ ಗ್ರೂಪ್ ಆಪ್ ಹೋಟೆಲ್ ಎಂಬ ಸಾಮ್ರಾಜ್ಯವನ್ನು ಕಟ್ಟಿದವರು. ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಸಮರ್ಪಿಸಿದ ಕೊಡುಗೈ ದಾನಿ ಸುರೇಶ್ ಎಸ್ ಪೂಜಾರಿಯವರು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು.
ಶ್ರೀ ನಾರಾಯಣಗುರು ಏಜ್ಯುಕೇಶನಲ್&ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರದ ಅಧ್ಯಕ್ಷರಾಗಿ ಕಳೆದ 35 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ, ಸಮಾಜದ ಅತ್ಯಂತ ಕೆಟ್ಟ ಕಡೆಯ ಕುಟುಂಬಕ್ಕೂ ಕೈಗೆಟುಕುವ ಸುಸಜ್ಜಿತ ಕಲ್ಯಾಣ ಮಂಟಪ ದೊರೆಯಬೇಕು ಎನ್ನುವ ಆಶಯದಿಂದ 35 ವರ್ಷಗಳ ಹಿಂದೆಯೇ ಕುಂದಾಪುರದಲ್ಲಿ ಶ್ರೀ ನಾರಾಯಣಗುರು ಕಲ್ಯಾಣ ಮಂಟಪವನ್ನು ನಿರ್ಮಿಸಿ ಬಡವರ ಪಾಲಿನ ಬೆಳಕಾದವರು.
ಬದುಕಿನುದ್ದಕ್ಕೂ ದುಡಿಮೆ ಹಾಗೂ ವಿದ್ಯೆಗೆ ಆದ್ಯತೆ ನೀಡಿದ್ದ ಸುರೇಶ್ ಪೂಜಾರಿ, ಶ್ರೀ ನಾರಾಯಣಗುರು ಶೈಕ್ಷಣಿಕ & ಸಾಂಸ್ಕ್ರತಿಕ ಟ್ರಸ್ಟ್ ಸ್ಥಾಪಿಸುವುದರ ಮೂಲಕ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು ಎಂದಿದ್ದಾರೆ.
ಹೋಟೆಲ್ ಸಾಮ್ರಾಜ್ಯದ ಅಧಿಪತಿಯಾಗಿ, ಕೊಡುಗೈ ದಾನಿಯಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಎಸ್. ಪೂಜಾರಿ ಪಡುಕೋಣೆ ವಿಧಿವಶರಾಗಿದ್ದು ತುಂಬಲಾರದ ನಷ್ಟವಾಗಿದ್ದು, ಸದಾ ಕಾಲ ಸಮಾಜದ ಅಶಕ್ತರಿಗೆ ನೆರಳಾಗಿ ಬದುಕಿ ಬಾಳಿದ್ದ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಕೋರಲು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ (ರಿ.), ಶ್ರೀ ನಾರಾಯಣಗುರು ಶೈಕ್ಷಣಿಕ & ಸಾಂಸ್ಕೃತಿಕ ಟ್ರಸ್ಟ್ (ರಿ.), ಕುಂದಾಪುರ ಶ್ರೀ ನಾರಾಯಣಗುರು ಯುವಕ ಮಂಡಲ (ರಿ.), ಕುಂದಾಪುರ ಬಿಲ್ಲವ ಮಹಿಳಾ ಘಟಕ, ಕುಂದಾಪುರ ಇವರ ಜಂಟೀ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಸಾರ್ವಜನಿಕ ಶ್ರಧ್ದಾಂಜಲಿ ಸಭೆಯಲ್ಲಿ ಸಾರ್ವಜನಿಕರು, ಬಂಧುಗಳು, ಹಿತೈಷಿಗಳು, ಸ್ನೇಹಿತರು ಎಲ್ಲರೂ ಆಗಮಿಸಿ ಸುರೇಶ ಎಸ್. ಪೂಜಾರಿ ಪಡುಕೋಣೆಯವರ ಆತ್ಮ ಸದ್ಗತಿಗಾಗಿ ಪ್ರಾರ್ಥಿಸಬೇಕು ಎಂದು ಅಶೋಕ್ ಪೂಜಾರಿ ಮನವಿ ಮಾಡಿದ್ದಾರೆ.