ಕುಂದಾಪುರ: ಪಂಚಗಂಗಾ ರೈಲಿಗೆ ಐದು ಹೆಚ್ಚುವರಿ ಬೋಗಿ ಅಳವಡಿಕೆ ವೇಳಾಪಟ್ಟಿ ಬದಲಿಸದಂತೆ ಮನವಿ

ಕುಂದಾಪುರ: ಕರಾವಳಿ ಕರ್ನಾಟಕದ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಬೇಡಿಕೆಯಂತೆ ಹೆಚ್ಚುವರಿ ಕೋಚ್ಗಳನ್ನು ಅಳವಡಿಕೆ ಮಾಡಲಾಗಿದೆ. ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಆಗ್ರಹ ಕೇಳಿಬಂದಿದೆ.


ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡದೆ ಹೆಚ್ಚುವರಿ ಕೋಚ್ ಅಳವಡಿಸಬೇಕೆಂಬ ಬೇಡಿಕೆ ಇಡುತ್ತಲೇ ಬಂದಿದ್ದ ಉತ್ತರ ಕನ್ನಡ ರೈಲು ಬಳಕೆದಾರರ ಸಮಿತಿ ಹಾಗೂ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಮನವಿಗೆ ನೈಋತ್ಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬುಧವಾರದಿಂದ ಪಂಚಗಂಗಾ ರೈಲಿಗೆ ಹೆಚ್ಚುವರಿ 5 ಕೋಚ್ ಅಳವಡಿಸಲಾಗಿದ್ದು 400 ಹೆಚ್ಚುವರಿ ಸೀಟ್ ಗಳು ಲಭ್ಯವಾಗಿವೆ. ಕಾರವಾರ-ಯಶವಂತಪುರ ರೈಲನ್ನು 6 ತಿಂಗಳು ರದ್ದು ಮಾಡಿರುವುದರಿಂದ ಪರ್ಯಾಯ ವ್ಯವಸ್ಥೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಮಟಾ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದ್ದರು. ಹೊಸ ರೈಲಿನ ಬದಲು ಪಂಚಗಂಗಾ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಸಲು ಇಲಾಖೆ ನಿರ್ಧರಿಸಿತ್ತು.

ವೇಳಾಪಟ್ಟಿ ಬದಲಾವಣೆ ಬೇಡ: ಹೆಚ್ಚುವರಿ ಬೋಗಿ ಅಳವಡಿಕೆಯಿಂದ ಪ್ರಯಾಣಿಕರಿಗೆ ಅನುಕೂಲವಾಗಿದೆ. ವೇಳಾಪಟ್ಟಿ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ವೇಳಾಪಟ್ಟಿ ಬದಲಾವಣೆ ಮಾಡದೆ ರೈಲಿನ ವೇಗವನ್ನು ಹೆಚ್ಚಿಸಲು ನೈಋತ್ಯ ರೈಲ್ವೆ ಕ್ರಮ ಕೈಗೊಳ್ಳಬೇಕು ಎಂದು ರೈಲು ಹೋರಾಟ ಸಂಘಟನೆಗಳು ಒತ್ತಾಯಿಸಿವೆ.