ಕುಂದಾಪುರ: ವಿವಾಹಿತ ಮಹಿಳೆ, ವಿವಾಹಿತ ಯುವಕ ನಾಪತ್ತೆ! ಹೊಳೆಯಲ್ಲಿ ಹುಡುಕಾಡಿದ ಅಗ್ನಿಶಾಮಕದಳ!
ಕುಂದಾಪುರ: ವಿವಾಹಿತ ಮುಸ್ಲಿಂ ಮಹಿಳೆಯೊಬ್ಬಳು ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತನ್ನೆರಡು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ತನ್ನ ಸ್ಕೂಟರ್ ನಲ್ಲಿ ಕೋಡಿ ಸೇತುವೆ ಸಮೀಪ ಹೋಗಿ ಚಪ್ಪಲಿ ಮತ್ತು ಸ್ಕೂಟರನ್ನು ಬಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಮೂಲತಃ ಉಡುಪಿಯ, ಪ್ರಸ್ತುತ ಕುಂದಾಪುರದ ವಿಠಲವಾಡಿ ನಿವಾಸಿ ಹೀನಾ ಕೌಷರ್ (33) ಎಂಬ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾದವಳು. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕುಂದಾಪುರ ಚರ್ಚ್ ರೋಡ್ ನಿಂದ ಕೋಡಿಗೆ ಹೋಗುವ ಸೇತುವೆ ಬಳಿ ಈಕೆಯ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆ ಯಾಗಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೊಲಿಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಸೇತುವೆ ಸಮೀಪ ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ. ಇಡೀ ದಿನದ ಹುಡುಕಾಟದ ಬಳಿಕವು ಮಹಿಳೆ ಪತ್ತೆಯಾಗಿಲ್ಲ.

ಆದರೆ ಹೀನಾ ಕೌಷರ್ ನಾಪತ್ತೆಯಾಗಿರುವ ಸಮಯಕ್ಕೆ ಹೆಮ್ಮಾಡಿಯ ನಿವಾಸಿ ಜಾಫರ್ ಎಂಬುವರ ಪುತ್ರ, ಕುಂದಾಪುರದ ಫುಡ್ ಮಾರ್ಕ್ ಹೊಟೆಲ್ ನ ಸಾಹಿಲ್ (36) ಎಂಬ ವಿವಾಹಿತ ಯುವಕನೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಸಾಹಿಲ್ ಗೆ ಈ ಹಿಂದೆ ಮದುವೆಯಾಗಿದ್ದು ಒಬ್ಬ ಮಗನಿದ್ದಾನೆ. ಸಾಹಿಲ್ ಪತ್ನಿ ತವರು ಮನೆಯಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಹೀನಾ ಕೌಶರ್ ಸ್ಕೂಟರ್ ಪತ್ತೆಯಾಗಿರುವ ಕೋಡಿ ಸೇತುವೆ ಸಮೀಪ ಸಾಹಿಲ್ ಸ್ಕೂಟರ್ ಜೊತೆ ನಿಂತಿರುವುದನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ.

ನಾಪತ್ತೆಯ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಅದೇ ಕಾರಣಕ್ಕೆ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಹೀನಾ ಕೌಷರ್ ಚಪ್ಪಲಿ, ಸ್ಕೂಟರ್ ಬಿಟ್ಟಿದ್ದರೂ ಮೊಬೈಲ್ ಬಿಟ್ಟು ಹೋಗಿಲ್ಲ. ಸಾಹಿಲ್ ನಾಪತ್ತೆಯಾಗಿದ್ದು ಆತ ಬಂದಿದ್ದ ಸ್ಕೂಟರ್ ಪತ್ತೆಯಾಗಿಲ್ಲ. ಅಲ್ಲದೇ 5-10 ನಿಮಿಷಗಳ ಅಂತರದಲ್ಲಿ ಇಬ್ಬರ ಮೊಬೈಲೂ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಅವರಬ್ಬರೂ ಜೊತೆಯಾಗಿ ಓಡಿ ಹೀಗಿರಬಹುದು ಎನ್ನುವ ಶಂಕೆ ಈಗ ಸಾರ್ವಜನಿಕ ವಲಯದಿಂದ ಕೆಳಿ ಬರುತ್ತಿದೆ.

ನಾಪತ್ತೆಯಾಗಿರುವ ಹೀನಾ ಕೌಷರ್ ಗೆ ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿ ಇದ್ದಾರೆ. ಈಕೆಯ ಪತಿ ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದಾರೆ. ನಾಪತ್ತೆಯಾಗಿರುವ ಸಾಹಿಲ್ ಕೂಡಾ ವಿವಾಹಿತನಾಗಿದ್ದು, ಈತನ ಅಕ್ರಮ ಸಂಬಂಧಕ್ಕೆ ರೋಸಿ ಹೋಗಿದ್ದ ಪತ್ನಿ ತನ್ನ ಮಗುವಿನೊಂದಿಗೆ ತವರು ಮನೆ ಸೇರಿದ್ದಾಳೆ ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಅಕ್ರಮ ಸಂಬಂಧವಿದ್ದುದರಿಂದಲೇ ಜನರ ದಿಕ್ಕು ತಪ್ಪಿಸುವ ಸಲುವಾಗಿ ಸ್ಕೂಟರ್ ಮತ್ತು ಚಪ್ಪಲಿಯನ್ನು ಹೊಳೆ ಬದಿಯಲ್ಲಿ ಬಿಟ್ಟು ನಾಪತ್ತೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೀನಾ ಕೌಷರ್ ಪತಿ ಸುದ್ಧಿ ತಿಳಿದ ಕೂಡಲೇ ಊರಿಗೆ ಆಗಮಿಸಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.