ಮಂಗಳೂರು ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ, ಎಸ್ಪಿಯಾಗಿ ಡಾ. ಅರುಣ್ ಕುಮಾರ್, ಉಡುಪಿಗೆ ಹರಿರಾಮ್ ಶಂಕರ್
ಉಡುಪಿ: ರಕ್ತದೋಕುಳಿ ಹರಿಯುತ್ತಿದ್ದ ದಕ್ಷಿಣ ಕನ್ನಡಕ್ಕೆ ಭರ್ಜರಿ ಸರ್ಜರಿ ನಡೆಸಲು ಹೊರಟಿದೆ ರಾಜ್ಯ ಸರ್ಕಾರ. ತುರ್ತು ಚರ್ಚೆಯ ಬಳಿಕ ಇದೀಗ ದಕ್ಷಿಣ ಕನ್ನಡ ಎಸ್ ಪಿ ಯತೀಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ದೋ ನಂಬರ್ ದಂಧೆ, ಮರಳು, ಕೆಂಪುಕಲ್ಲು ದಂಧೆಗಳಿಗೆ ಬ್ರೇಕ್ ಹಾಕಿ ಅಕ್ರಮ ದಂಧೆಕೋರರಿಗೆ ಚಳಿ ಹುಟ್ಟಿಸಿದ್ದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ಧ ಡಾ. ಅರುಣ್ ಕುಮಾರ್ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿಯನ್ನಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇನ್ನು ಮಂಗಳೂರು ನಗರದ ಡಿಐಜಿ ಹಾಗೂ ಆಯುಕ್ತರಾಗಿದ್ದ ಅನುಪಮ್ ಅಗರವಾಲ್ ಅವರನ್ನು ಆರ್ಥಿಕ ಅಪರಾಧಗಳ ಹಾಗೂ ಅಪರಾಧ ತನಿಖೆ ವಿಭಾಗದ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ. ಇಂಟಲಿಜೆನ್ಸ್ನ ಡಿಐಜಿ ಆಗಿದ್ದ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ಅವರನ್ನು ಮಂಗಳೂರು ನಗರದ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮತ್ತು ಕಮಿಷನರ್ ಆಫ್ ಪೊಲೀಸ್ ಆಗಿ ವರ್ಗಾಯಿಸಲಾಗಿದೆ.

ಈ ಹಿಂದೆ ಕುಂದಾಪುರದಲ್ಲಿ ಎಸಿಪಿಯಾಗಿದ್ದ ಸದ್ಯ ಇಂಟಲಿಜೆನ್ಸ್ನ ಎಸ್ಪಿ ಆಗಿದ್ದ ಹರಿರಾಂ ಶಂಕರ್ ಅವರನ್ನು ಉಡುಪಿಗೆ ನೂತನ ಎಸ್ಪಿ ಯಾಗಿ ನೇಮಕ ಮಾಡಲಾಗಿದೆ. ಸೈಬರ್ ಕ್ರೈಂ ಮತ್ತು ನಾರ್ಕೋಟಿಕ್ಸ್ ಹಾಗೂ ಅಪರಾಧ ತನಿಖೆ ವಿಭಾಗದ ಡಿಐಜಿ ಆಗಿದ್ದ ಬೋರಸೆ ಭೂಷಣ್ ಗುಲಾಬ್ರಾವ್ ಅವರನ್ನು ಬೆಳಗಾವಿ ನಗರದ ಡಿಐಜಿ ಮತ್ತು ಆಯುಕ್ತರಾಗಿ ವರ್ಗಾಯಿಸಲಾಗಿದೆ.

ಒಟ್ಟಾರೆಯಾಗಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿ ಚಳಿ ಹುಟ್ಟಿಸಿದ್ದ ಎಸ್ಪಿ ಡಾ. ಅರುಣ್ ಕುಮಾರ್ ದಕ್ಷಿಣ ಕನ್ನಡದ ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕೋದ್ರಲ್ಲಿ ಯಶಸ್ಸು ಕಣ್ತಾರಾ? ಅರುಣ್ ಉಡುಪಿಯಲ್ಲಿ ಸೃಷ್ಟಿಸಿದ್ದ ಚಾರ್ಮನ್ನು ಹರೀರಾಮ್ ಶಂಕರ್ ಮೆಂಟೇನ್ ಮಾಡ್ತಾರಾ? ಗೊತ್ತಿಲ್ಲ. ಅಪರೇಷನ್ ನಡೆದಿದೆ. ಉಡುಪಿಯಲ್ಲಿ ಇದುವರೆಗೆ ಕದ್ದು ಕಾರ್ಯಾಚರಿಸುತ್ತಿದ್ದ ದಂಧೆಕೋರರು ನಿಟ್ಟುಸಿರು ಬಿಟ್ಟಿದ್ದು ಸತ್ಯ.