ಮೂರನೇ ದಿನಕ್ಕೆ ಕಾಲಿಟ್ಟ ಪುರಸಭಾ ನೌಕರರ ಪ್ರತಿಭಟನೆ
ಕುಂದಾಪುರ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಕರೆಯಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ರಾಜ್ಯಾದ್ಯಂತ ನಡೆಯುತ್ತಿರುವ ಪುರಸಭಾ ನೌಕರರ ಪ್ರತಿಭಟನೆ ಕುಂದಾಪುರದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕುಂದಾಪುರ ಪುರಸಭಾ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕಳೆದ ಮೂರು ದಿನಗಳಿಂದ ಪುರಸಭಾ ವ್ಯಾಪ್ತಿಯ ಕಚೇರಿ ಕೆಲಸಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯದೇ ತೊಂದರೆ ಅನುಭವಿಸುವಂತಾಗಿದೆ.
ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು, ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ ಕೆಜಿಐಡಿ ಮತ್ತು ಇತರೆ ಸೌಲಭ್ಯಗಳನ್ನು ಪುರಸಭಾ ನೌಕರರಿಗೆ ಅನ್ವಯಿಸಬೇಕು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ ಸೂಪರ್ ವೈಸರ್ಸ್, ಕಂಪ್ಯೂಟರ್ ಆಪರೇಟರ್, ಯುಜಿಡಿ ಸಹಾಯಕರು ಸೇರಿದಂತೆ ವಿವಿಧ ವೃಂದದ ಹೊರಗುತ್ತಿಗೆ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೆಯಿಂದ ನೇರಪಾವತಿಗೆ ಒಳಪಡಿಸಬೇಕು, ದಿನಗೂಲಿ, ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂ ಮಾಡಬೇಕು. ವಿಶೇಷ ನೇಮಕಾತಿಯಡಿ ಖಾಯಂಗೊಂಡ ನೌಕರರಿಗೆ ಎಸ್.ಎಫ್.ಸಿ. ಅನುದಾನದಿಂದ ವೇತನ ನೀಡಬೇಕು. ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯನ್ನು ಅನ್ವಯಗೊಳಿಸಬೇಕು, ಅಕೌಂಟಿಂಗ್ ಕನ್ಸಲ್ಟೆಂಟ್, ಜೂನಿಯರ್ ಮತ್ತು ಸೀನಿಯರ್ ಪ್ರೋಗ್ರಾಮರುಗಳಿಗೆ ಸೇವಾ ಸೌಲಭ್ಯವನ್ನು ಒದಗಿಸಬೇಕು, ಪೌರಕಾರ್ಮಿಕರುಗಳು ಗುಡಿಸಲುಗಳ ಬದಲಾಗಿ ಆರ್.ಸಿ.ಸಿ. ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಸರ್ಕಾರ ರೂ.7.50 ಲಕ್ಷ ಮಂಜೂರು ಮಾಡಿದ್ದು, ಕಟ್ಟಡ ಸಾಮಗ್ರಿಗಳ ಬೆಲೆ ಹೆಚ್ಚಳವಾಗಿರುವುದರಿಂದ ಅದನ್ನು ರೂ.15.00 ಲಕ್ಷಕ್ಕೆ ಏರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಕುಂದಾಪುರದಲ್ಲಿ ಸಿಐಟಿಯು ಸಂಘಟನೆ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದೆ.