ಕುಂದಾಪುರ : ಮೇ 7, 8ರಂದು ನೆಂಪುವಿನಲ್ಲಿ ಉಡುಪಿ ಜಿಲ್ಲೆಯ ಎರಡನೇ ಕಡೆಗೋಲು ಕೃಷ್ಣ ದೇವಸ್ಥಾನ ಲೋಕಾರ್ಪಣೆ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ಎರಡನೆಯದ್ದು ಎಂಬ ಹೆಮ್ಮೆಗೆ ಪಾತ್ರವಾದ ಕಡೆಗೋಲು ಶ್ರೀ ಕೃಷ್ಣ ದೇವಸ್ಥಾನ ಮೇ 8ರಂದು ಕುಂದಾಪುರ ತಾಲೂಕಿನ ನೆಂಪುವಿನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಹಾಲಾಡಿ ಪಂಚಾಂಗ ಜೋಯಿಸರಾದ ವಿದ್ವಾನ್ ಟಿ. ವಾಸುದೇವ ಜೋಯಿಸರು ಹೇಳಿದ್ದಾರೆ.
ಮೇ 7ರಿಂದ ನೆಂಪುವಿನ ಬಿ.ಎಂ.ಸುಕುಮಾರ ಶೆಟ್ಟರ ನೇತೃತ್ವದಲ್ಲಿ ಶ್ರೀ ಕೃಷ್ಣ ದೇವರ ಪುನಃಪ್ರತಿಷ್ಟೆ, ಕುಂಭಾಭಿಷೇಕ, ಪೂಜಾ ವಿಧಿ ವಿಧಾನ ಕಾರ್ಯಗಳು ಆರಂಭಗೊಳ್ಳಲಿದೆ ಎಂದು ತಿಳಿಸಿದ ಅವರು, ಮೇ 8ರಂದು ಮಧ್ಯಾಹ್ನ ದೇವರ ಪ್ರತಿಷ್ಟಾ ಮಹೋತ್ಸವ ನಡೆಯಲಿದೆ ಎಂದರು. ಶೃಂಗೇರಿ ಮಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಕುಂಭಾಭಿಷೇಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.
ಶ್ರೀ ಕೃಷ್ಣನ ಶಿಲಾಮಯ ದೇವಸ್ಥಾನದವನ್ನು ಅತ್ತೂರಿನ ಪ್ರಸಿದ್ಧ ಮಹೇಶ ಶಿಲ್ಪಿಗಳು ನಿರ್ಮಿಸಿದ್ದು, ಉಡುಪಿ ಜಿಲ್ಲೆಯ ಎರಡನೇಯ ಕಡೆಗೋಲು ಕೃಷ್ಣನ ದೇವಸ್ಥಾನ ಇದಾಗಿದೆ. ಕುಂದಾಪುರ ಹಾಗೂ ಬೈಂದೂರಿನಲ್ಲಿ ಇದೇ ಮೊದಲ ಬಾರಿಗೆ ಶ್ರೀಕೃಷ್ಣ ದೇವಸ್ಥಾನ ಪ್ರತಿಷ್ಟೆಯಾಗುತ್ತಿದ್ದು ಸದ್ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷ್ಣದೇವರ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದ್ದಾರೆ. ಈ ಸಂದರ್ಭ ಮಾಜೀ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು,