BlogEducationGovernmentHighlightsHuman storiesLifestyleLocal newsNational NewsOthersPoliticsProtestState newsTop StoriesTrending

ಮಾಹಿತಿ ಹಕ್ಕು ಔದಾರ್ಯವಲ್ಲ, ಸಾಂವಿಧಾನಿಕ ಹಕ್ಕು! – ಆರ್‌ಟಿಐ ಬಲಪಡಿಸಿದ ಮಧ್ಯಪ್ರದೇಶ ಹೈಕೋರ್ಟ್‌

Aware others:

ಮಧ್ಯಪ್ರದೇಶ: ಮಾಹಿತಿ ಹಕ್ಕು ಕಾಯ್ದೆ ಸರ್ಕಾರ ಅಥವಾ ಅಧಿಕಾರಿಗಳು ತೋರುವ ಔದಾರ್ಯವಲ್ಲ. ಅದು ನಮ್ಮ ದೇಶದ ಸಾಂವಿಧಾನಿಕ ಹಕ್ಕು ಎಂದು ಮಧ್ಯಪ್ರದೇಶದ ಜಬಲ್ಪುರ ಹೈಕೋರ್ಟ್ ಎಪ್ರಿಲ್ 3ರಂದು ಮಹತ್ವದ ತೀರ್ಪು ನೀಡಿದೆ. ಇದರಿಂದ ಆರ್.ಟಿ.ಐ. ಕಾಯ್ದೆಗೆ ಮತ್ತಷ್ಟು ಬಲ ಬಂದಂತಾಗಿದೆ. ಅಲ್ಲದೇ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸ ಹೊರಟ ಅಧಿಕಾರಶಾಹಿ ವರ್ಗಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.

ಜಬಲ್ಪುರ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿದ್ದ ” ಡಾ. ಜಯಶ್ರೀ ದುಬೆ vs ಕೇಂದ್ರ ಮಾಹಿತಿ ಆಯೋಗ ಮತ್ತು ಇತರರು” ಪ್ರಕರಣದಲ್ಲಿ ಕೋರ್ಟ್ ಮಹತ್ತರ ತೀರ್ಪು ನೀಡಿದೆ. ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳು ರಹಸ್ಯ ಅಥವಾ ಗುಪ್ತ ಮಾಹಿತಿಗಳಲ್ಲ. ಒಬ್ಬ ವ್ಯಕ್ತಿಯನ್ನು ಸಾರ್ವಜನಿಕ ಹುದ್ದೆಗೆ ನೇಮಿಸಿದರೆ, ಅವರ ಶೈಕ್ಷಣಿಕ ಅರ್ಹತೆ, ಅನುಭವ ಪ್ರಮಾಣಪತ್ರ, ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳು, ನೇಮಕಾತಿ ಆದೇಶ ಇತ್ಯಾದಿ ದಾಖಲೆಗಳು ಸಾರ್ವಜನಿಕರಿಗೆ ಸಾರ್ವಜನಿಕ ಮಾಹಿತಿಯಾಗಿದ್ದು, ಆರ್‌ಟಿಐ ಮೂಲಕ ಪಡೆಯಬಹುದು. ನಿರ್ದಿಷ್ಟ ಕಾರಣವನ್ನು ನೀಡದೆ ಮಾಹಿತಿ ಮಾಹಿತಿ ನೀಡುವುದನ್ನು ತಡೆಹಿಡಿಯುವುದು ಆರ್‌ಟಿಐ ಕಾಯ್ದೆಯ ದುರುಪಯೋಗವಾಗಿದೆ. ಸಾರ್ವಜನಿಕ ಹಿತಾಸಕ್ತಿ ಅತ್ಯಂತ ಮುಖ್ಯವಾಗಿದ್ದು, ಇವುಗಳಿಂದ ಪಾರದರ್ಶಕತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಮಾಹಿತಿ ಆಯೋಗವು ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(h), 8(1)(j) ಮತ್ತು 11 ರ ಅಡಿಯಲ್ಲಿ ಈ ಆರ್‌ಟಿಐ ಅನ್ನು ತಿರಸ್ಕರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ನೇಮಕಾತಿಯಲ್ಲಿ ಭ್ರಷ್ಟಾಚಾರ ಅಥವಾ ಅಕ್ರಮಗಳ ಬಗ್ಗೆ ಶಂಕೆ ಇದ್ದರೆ, ಆಯ್ಕೆ ಪ್ರಕ್ರಿಯೆಯು ನ್ಯಾಯಯುತವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಹೇಳಿರುವ ಕೋರ್ಟ್, ಗೌಪ್ಯತೆಯ ನೆಪದಲ್ಲಿ ಈ ಸಂಗತಿಗಳನ್ನು ಮರೆಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕು ಖಾಯ್ದೆಯ ವಿಧಿ 11 ರ ತಪ್ಪು ವ್ಯಾಖ್ಯಾನ ಮಾಡುವಂತಿಲ್ಲ ಎಂದೂ ಹೈಕೋರ್ಟ್ ಆಯೋಗದ ಕಿವಿ ಹಿಂಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಆಯೋಗವು ಮೂರನೇ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಮಾಹಿತಿ ನೀಡಲು ನಿರಾಕರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ಮಾಹಿತಿಯು ಸಾರ್ವಜನಿಕ ಹಿತಾಸಕ್ತಿಯಲ್ಲಿದ್ದರೆ ಮತ್ತು ಮೂರನೇ ವ್ಯಕ್ತಿಗೆ ನಿಜವಾದ ಹಾನಿಯಾಗದಿದ್ದರೆ ಆಯೋಗವು ಮಾಹಿತಿ ನೀಡಲೇ ಬೇಕು ಎಂದು ಸ್ಪಷ್ಟಪಡಿಸಿದ್ದಲ್ಲದೇ ಅನರ್ಹ ವ್ಯಕ್ತಿಯನ್ನು ಉಳಿಸಲು ಮಾಹಿತಿ ನೀಡದೇ ಇದ್ದುದ್ದಕ್ಕೆ ಸಂಬಂಧಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಯು 25 ಸಾವಿರ ರೂಪಾಯಿ ದಂಡವನ್ನು ಆರ್‌ಟಿಐ ಅರ್ಜಿದಾರ ಡಾ. ಜಯಶ್ರೀ ದುಬೆಯವರಿಗೆ ನೀಡುವಂತೆ ಆದೇಶಿಸಿತು. ಅಲ್ಲದೇ ವಿನಂತಿಸಿದ ಎಲ್ಲಾ ಮಾಹಿತಿಯನ್ನು ಅರ್ಜಿದಾರರಿಗೆ 15 ದಿನಗಳಲ್ಲಿ ಉಚಿತವಾಗಿ ನೀಡಬೇಕು ಎಂದು ನ್ಯಾಯಾಲಯ ಹೇಳಿತು.

ಸರ್ಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷಿಸುವ ಲಕ್ಷಾಂತರ ಜನರಿಗೆ ಈ ತೀರ್ಪು ಒಂದು ಉದಾಹರಣೆಯಾಗಿದ್ದು, ಜಬಲ್ಪುರ ಹೈಕೋರ್ಟ್ ಆದೇಶವನ್ನು ಮಾಹಿತಿ ಹಕ್ಕು ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶರಶ್ಚಂದ್ರ ಹೆಗ್ಡೆ ಜನಸಾಮಾನ್ಯರಿಗಿರುವ ಏಕೈಕ ಅಸ್ತ್ರ ಮಾಹಿತಿ ಹಕ್ಕು ಕಾಯ್ದೆ. ಹೈಕೋರ್ಟ್ ಆದೇಶದಿಂದ ಮಾಹಿತಿ ಹಕ್ಕು ಕಾಯ್ದೆ ಇನ್ನಷ್ಟು ಗಟ್ಟಿಯಾಗಿದೆ.  ಸರ್ಕಾರಿ ನೇಮಕಾತಿಗಳು, ನೇಮಕಾತಿಗಳು ಅಥವಾ ನಿಧಿಯ ದುರುಪಯೋಗದ ಬಗ್ಗೆಯೂ ಮಾಹಿತಿಯನ್ನು ಬಯಸಿದರೆ, ಆರ್‌ಟಿಐ ನಿಮ್ಮ ಸಾಂವಿಧಾನಿಕ ಆಯುಧವಾಗಿದೆ ಎಂದಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!