ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಸಿಪಿಎಂ ಮನವಿ
ಕುಂದಾಪುರ: ಹಲವು ದಿನಗಳಿಂದ ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲ ಎಂದು ಸಾರ್ವಜನಿಕರು ವ್ಯಕ್ತಪಡಿಸಿದ ದೂರಿನ ಹಿನ್ನಲೆಯಲ್ಲಿ ಬುಧವಾರ ಸಿದ್ದಾಪುರದ ಸ್ಥಳೀಯ ನಾಗರಿಕರು ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಕಾರ್ಯಕರ್ತರು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ ಅವರನ್ನು ಭೇಟಿ ಮಾಡಿ ಖಾಯಂ ವೈದ್ಯರನ್ನು ನೇಮಕ ಮಾಡಬೇಕು ಎಂದು ಮನವಿ ನೀಡಿದರು.

ಈ ಸಂದರ್ಭ ಮಾತನಾಡಿದ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸಿದ್ದಾಪುರದ ಸುತ್ತ ಮುತ್ತಲ ಗ್ರಾಮಗಳಲ್ಲಿ ಬಹುತೇಕ ಜನರು ಕುಂದಾಪುರ ತಾಲೂಕು ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ತುರ್ತು ಅಪಘಾತ ಸಂದರ್ಭಗಳಲ್ಲಿ ರಾತ್ರಿ ವೇಳೆಯಲ್ಲಿ ಜೀವ ಉಳಿಸಿಕೊಳ್ಳಲು ಪ್ರಾಥಮಿಕ ಚಿಕಿತ್ಸೆ ಇಲ್ಲದಿರುವುದು ಸರಕಾರದ ನಿರ್ಲಕ್ಷ್ಯ ವಹಿಸಿರುವುದನ್ನು ಸಿಪಿಎಂ ಖಂಡಿಸುತ್ತದೆ. 24×7 ಸೇವೆ ಒದಗಿಸಲು ಸರ್ಕಾರ ಮುಂದಾಗದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಡಾ ಪ್ರೇಮಾನಂದ ಅವರು, ಈಗಾಗಲೇ ಖಾಯಂ ವೈದ್ಯರು ನೇಮಕ ಆಗಿದೆ ತಕ್ಷಣದಿಂದಲೇ ವೈದ್ಯರು ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಇರುತ್ತಾರೆ ಎಂದು ಹೇಳಿದರು.
ನಿಯೋಗದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ ವಿ, ಸ್ಥಳೀಯರಾದ ರಾಘವೇಂದ್ರ ಆಚಾರ್ಯ ಸಿದ್ದಾಪುರ, ಅಲೆಕ್ಸಾಂಡರ್ ಮಹಾಬಲ ಶೆಟ್ಟಿ,ಕೊರಗ ಮೇಸ್ತ್ರಿ ಕೊಡ್ಲು, ನರಸಿಂಹ ಪೂಜಾರಿ ಹಳ್ಳಿಹೊಳೆ, ಸುಕುಮಾರ್ ಇದ್ದರು.
