ಬೈಂದೂರು: ಸೋದರತ್ತೆಯ ಮನೆಯನ್ನೇ ದೋಚಿದ ಅಳಿಯ ಎಂಡ್ ಟೀಂ ಪೊಲೀಸ್ ಬಲೆಗೆ
ಕುಂದಾಪುರ: ಸ್ವಂತ ಅಪ್ಪನ ತಂಗಿಯ (ಸೋದರತ್ತೆ) ಮನೆಗೇ ಕನ್ನ ಹಾಕಿದ ಕಿರಾತಕ ಮತ್ತು ಆತನ ತಂಡವನ್ನು ಬೈಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬೀಗ ಹಾಕಿ ಯಕ್ಷಗಾನಕ್ಕೆ ತೆರಳಿದ್ದ ವೇಳೆ ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿ, ಚಿನ್ನ, ಬೆಳ್ಳಿ, ನಗದು ಹಾಗೂ ಲ್ಯಾಪ್ ಟಾಪ್ ಎಗರಿಸಿದ್ದ ಸೋದರಳಿಯ ಹಾಗೂ ಆತನ ಇಬ್ಬರು ಜಾತಿ ಸಹಚರರನ್ನು ಬೈಂದೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತ ಆರೋಪಿಗಳನ್ನು ಉಪ್ಪುಂದದ ದೇವಸ್ಥಾನದ ಸಮೀಪದ ನಿವಾಸಿ, ಕಳ್ಳತನ ನಡೆದ ಮನೆ ಮಾಲಕಿಯ ಸೋದರಳಿಯ ಯತಿರಾಜ್ ಗಾಣಿಗ, ಮಹೇಶ್ ಗಾಣಿಗ ಯಳಜಿತ್ ಹಾಗೂ ನಾಗೂರು ನಿವಾಸಿ ಕಾರ್ತಿಕ್ ಗಾಣಿಗ ಎಂದು ಗುರುತಿಸಲಾಗಿದೆ.
ಮಾರ್ಚ್ 10 ರಂದು ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಬಪ್ಪೆಹಕ್ಲುವಿನಲ್ಲಿರುವ ಜನಾರ್ದನ ಗಾಣಿಗ ಎಂಬವರು ಕುಟುಂಬ ಸಮೇತ ರಾತ್ರಿ ಮನೆಗೆ ಬೀಗ ಹಾಕಿ ಮನೆ ಸಮೀಪದ ಯಕ್ಷಗಾನ ಕಾರ್ಯಕ್ರಮಕ್ಕೆ ಹೋಗಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ವಾಪಾಸು ಬಂದು ನೋಡುವಾಗ ಯಾರೋ ಮನೆಯ ಬಾಗಿಲು ಮುರಿದು ಮನೆಯೊಳಗೆ ಹೋಗಿ ಕೊಠಡಿಯ ಕಪಾಟಿನಲ್ಲಿರಿಸಿದ ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿಯ ಅಭರಣಗಳನ್ನು ನಗದು ಹಣ ಮತ್ತು ಲ್ಯಾಪ್ಟಾಪ್ ಕಳವು ಮಾಡಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸಿದ ಬೈಂದೂರು ವೃತ್ತ ನಿರೀಕ್ಷಕರಾದ ಸವಿತ್ರತೇಜ, ಬೈಂದೂರು ಠಾಣೆಯ ಪಿ.ಎಸ್.ಐ ತಿಮ್ಮೇಶ್ ಬಿ.ಎನ್ ಮತ್ತು ನವೀನ ಪಿ. ಬೋರಕರ ಮತ್ತು ಬೈಂದೂರು ಠಾಣೆಯ ಸಿಬ್ಬಂದಿಗಳಾದ ಚಿದಾನಂದ, ಮಾಳಪ್ಪ , ಪರಯ್ಯ ಮಠಪತಿ , ನವೀನ್ ವೃತ್ತ ನಿರೀಕ್ಷಕರ ಕಛೇರಿಯ ಸಿಬ್ಬಂದಿಯವರಾದ ರವೀಂದ್ರ, ಅಶೋಕ ರಾಥೋಡ್ , ಶಂಕರ ಮತ್ತು ಚಂದ್ರರವರ ತಂಡ ಆರೋಪಿಗಳನ್ನು ಬಂಧಿಸಿ ಆರೋಪಿಗಳು ಕಳವು ಮಾಡಿರುವ ಚಿನ್ನಾಭರಣ, ಲ್ಯಾಪ್ಟಾಪ್ ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿರುವ ಮೊಬೈಲ್ ಹಾಗೂ ಚಿನ್ನ ಕರಗಿಸಲು ಬಳಸುವ ಮೆಷಿನ್ ಸೇರಿದಂತೆ ಅಂದಾಜು ಸುಮಾರು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿಲಾಗಿದೆ.

ಎರಡು ವರ್ಷಗಳ ಹಿಂದೆಯೂ ಯತಿರಾಜ್ ತನ್ನ ಸ್ವಂತ ದೊಡ್ಡಪ್ಪನ ಮನೆಯನ್ನು ದರೋಡೆ ಮಾಡಿದ್ದ ಎನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಇದ್ದರೂ ಸ್ವಂತ ತಮ್ಮದೇ ಮನೆಯ ಯುವಕನ ಬಗ್ಗೆ ಪೊಲೀಸ್ ದೂರು ನೀಡುವುದು ಬೇಡ ಎಂದು ಸುಮ್ಮನಾಗಿದ್ದರು ಎನ್ನಲಾಗಿದೆ. ಅಲ್ಲದೇ ಕೃತ್ಯ ನಡೆಸಿದ ನಂತರ ಆಭರಣಗಳನ್ನು ಮಾರಾಟ ಮಾಡುವುದು ಬೇಡ ಎಂದು ಸ್ವತಃ ಆರೋಪಿ ಯತಿರಾಜನೇ ಚಿನ್ನವನ್ನು ಕರಗಿಸುತ್ತಿದ್ದು, ಅದಕ್ಕಾಗಿ ಹೊಸ ಮೆಷೀನ್ ಮತ್ತು ಉಪಕರಣಗಳನ್ನೂ ಖರೀದಿಸಿ ಮನೆಗೆ ತಂದಿದ್ದ. ಸೋದರತ್ತೆಯ ಮನೆಯಿಂದ ಕದ್ದ ಚಿನ್ನವನ್ನೂ ಇದೇ ಯಂತ್ರದ ಸಹಾಯದಿಂದ ಕರಗಿಸಿದ್ದ. ಆತನ ಮನೆಯ ಕೋಣೆಗೆ ತನ್ನ ಸ್ವಂತ ಮನೆಯವರಿಗೂ ಪ್ರವೇಶ ನಿರಾಕರಿಸಿದ್ದ ಎನ್ನಲಾಗಿದೆ.