ಕುಂದಾಪುರ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ
ಕುಂದಾಪುರ: ಟೊಯೊಟೊ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಪ್ರಾಯೋಜಿತ 2025ರ ಸಾಲಿನ ರಾಜ್ಯ ಮಟ್ಟದ ಸುರಕ್ಷಾ ಮಾಸಾಚರಣೆ ಸ್ಪರ್ಧೆಯಲ್ಲಿ ಕುಂದಾಪುರದ ಬಿದ್ಕಲ್ಕಟ್ಟೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಇತ್ತೀಚೆಗೆ ಬಿದ್ಕಲ್ಕಟ್ಟೆಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಕೋಟ ಅರಕ್ಷಕ ಠಾಣೆಯ ಸಹಭಾಗಿತ್ವದೊಂದಿಗೆ ಸುರಕ್ಷಾ ಮಾಸಾಚರಣೆ ಅಭಿಯಾನ ಹಮ್ಮಿಕೊಂಡಿತ್ತು. ಈ ಅಭಿಯಾನದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಸಮೂಹ ಪೊಲೀಸ್ ಜೊತೆಗೂಡಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಸ್ಥಳೀಯವಾಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳ ಅಭಿಯಾನ ಪ್ರಶಂಸೆಗೆ ಕಾರಣವಾಗಿತ್ತು.

ರಾಜ್ಯದಾದ್ಯಂತ ನಡೆದ ಸುರಕ್ಷಾ ಮಾಸಾಚರಣೆ ಸ್ಪರ್ಧೆಯಲ್ಲಿ 60 ಐಟಿಐ ಕಾಲೇಜುಗಳು (ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು) ಭಾಗವಹಿಸಿದ್ದವು. ತಿಪಟೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಪೀಣ್ಯ ಐಟಿಐ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.