ಬೈಂದೂರು: 94ಸಿ ಹಕ್ಕು ಪತ್ರ ವಿತರಣೆಗೆ ಸಿದ್ಧರಾಗಿ – ಅಧಿಕಾರಿಗಳಿಗೆ ಶಾಸಕ ಗಂಟಿಹೊಳೆ ಸೂಚನೆ
ಬೈಂದೂರು: ಬರಲಿರುವ ಬಜೆಟ್ ಅಧಿವೇಶನ ಮುಗಿದ ತಕ್ಷಣ ಮುಂದಿನ ಹಂತದ 94 ಸಿ ಹಕ್ಕು ಪತ್ರ ವಿತರಣೆಗೆ ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಂಡ್ಸೆ ಹೋಬಳಿಯ 94 ಸಿ ಹಾಗೂ ಬಗರ್ ಹುಕುಂ ಕಡತ ಪರಿಶೀಲನೆ ಹಾಗೂ ವಿಲೇವಾರಿ ಸಂಬಂಧಿಸಿದ ಅರ್ಜಿ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆ ಹೋಬಳಿಯ ಗ್ರಾಮಗಳ 94 ಸಿ ಅರ್ಜಿಗಳ ತ್ವರಿತ ವಿಲೇವಾರಿ ಆಗಬೇಕು. ವಂಡ್ಸೆ ವ್ಯಾಪ್ತಿಯ ಗ್ರಾಮಗಳಲ್ಲಿ 94 ಸಿ ಅಡಿ ಅರ್ಜಿ ಹಾಕಿ ಭೂಮಿ ಹಕ್ಕಿಗಾಗಿ ಕಾಯುತ್ತಿರುವ ಅರ್ಹರನ್ನು ಹುಡುಕಿ ಅವರಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಈಗಾಗಲೇ 2023 ಏಪ್ರಿಲ್ ನಿಂದ ಈವರೆಗೆ ಸುಮಾರು 275ಕ್ಕೂ ಹೆಚ್ಚು 94 ಸಿ ಹಕ್ಕು ಪತ್ರ ಅರ್ಹರಿಗೆ ಒದಗಿಸಲಾಗಿದೆ. ಬಜೆಟ್ ಅಧಿವೇಶನ ಮುಗಿದ ತಕ್ಷಣ ಇನ್ನುಳಿದ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಬೇಕು. ಬಾಕಿ ಉಳಿದಿರುವ ಅರ್ಹ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಬಡವರಿಗೆ ಭೂ ಮಂಜೂರಾತಿ ಮಾಡಬೇಕು ಎಂದರು.

ವಂಡ್ಸೆ ಹೋಬಳಿಯಲ್ಲಿ ನಮೂನೆ 50, 53 ಹಾಗೂ 57 ರಲ್ಲಿ ಸಾಕಷ್ಟು ಅರ್ಜಿ ಗಳು ವಿಲೇವಾರಿ ಬಾಕಿ ಇರುವುದು ಗಮನ ದಲ್ಲಿದೆ. ಎಲ್ಲಾ ಅರ್ಹ ಅರ್ಜಿಗಳನ್ನು ತಂತ್ರಾoಶದಲ್ಲಿ ಅಳವಡಿಸುವ ಕಾರ್ಯವನ್ನು ಗ್ರಾಮ ಆಡಳಿತ ಅಧಿಕಾರಿಗಳು ವಿಳಂಬ ಮಾಡದೇ ಕಾಲ ಮಿತಿಯಲ್ಲಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.