ಕುಂದಾಪುರ: ಈ ಬಾರಿಯ ಯಕ್ಷರಾತ್ರಿ “ದಶಯಾನ” ಜನವರಿ 3ಕ್ಕೆ – ಪದ್ಮಮ್ಮಗೆ ಯಶೋಗಾಥೆ ಪುರಸ್ಕಾರ

ಕುಂದಾಪುರ: ಕಳೆದ 9 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಯಕ್ಷರಾತ್ರಿಯ ಯಶೋಗಾಥೆ ಪುರಸ್ಕಾರಕ್ಕೆ ಸಮಾಜ ಸೇವಕಿ ಪದ್ಮಮ್ಮ ಹೊದ್ರೋಳಿಯವರು ಭಾಜನರಾಗಿದ್ದಾರೆ ಎಂದು ಯಕ್ಷರಾತ್ರಿ ಸಂಯೋಜಕ ಗಜೇಂದ್ರ ಆಚಾರ್ ಕೋಣಿ ತಿಳಿಸಿದ್ದಾರೆ.
ಸತತ 9 ವರ್ಷಗಳಿಂದ ಯಕ್ಷರಾತ್ರಿ ಸಂಯೋಜನೆ ಮೂಲಕ ಯಕ್ಷಗಾನ, ಗೌರವ ಪುರಸ್ಕಾರ, ಅಸಕ್ತರಿಗೆ ನೆರವು ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಯಕ್ಷರಾತ್ರಿ ಜನವರಿ 3ರಂದು ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಯಕ್ಷರಾತ್ರಿ ಗೌರವ ಪುರಸ್ಕಾರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಡಾ. ದೀಪಕ್ ಕುಮಾರ್ ಶೆಟ್ಟಿ ಬಾರ್ಕೂರು, ಯಕ್ಷರಾತ್ರಿ ಕಲಾಗೌರವವಾಗಿ ಮಂದಾರ್ತಿ ಮೇಳದ ಹಿರಿಯ ಹಾಸ್ಯಗಾರ ಕಮಲಶಿಲೆ ಮಹಾಬಲ ದೇವಾಡಿಗ, ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರ ರವೀಂದ್ರ ದೇವಾಡಿಗ, ಹುಟ್ಟೂರ ಗೌರವವಾಗಿ ಸುಬ್ರಹ್ಮಣ್ಯ ಗಾಣಿಗ ಕೋಣಿ ಇವರಿಗೆ ನೀಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳಿಕ ಶ್ರೀ ಪೆರ್ಡೂರು ಮೇಳದವರ ಈ ವರ್ಷದ ಎರಡನೇ ಪ್ರಸಂಗ ಶ್ವೇತಾ ನಾಯ್ಕ್ ಬೊಳ್ಳಂಬಳ್ಳಿ ವಿರಚಿತ ಪ್ರಸಾದ ಕುಮಾರ್ ಮೊಗೆಬೆಟ್ಟು ಪದ್ಯ ರಚನೆಯ ಕ್ಷೀರ ಸಮುದ್ರ ಯಕ್ಷಕಾಶಿ ಹೊಸ ವರ್ಷದ ಮೊಟ್ಟಮೊದಲ ಪ್ರಸಂಗವಾಗಿ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದ್ದಾರೆ.