ಕಾಳಾವರ: ಡಾ! ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಸೇವಾ ಸಮಿತಿ ಅಸ್ತಿತ್ವಕ್ಕೆ

ಕುಂದಾಪುರ: ಇಲ್ಲಿಗೆ ಸಮೀಪದ ಕಾಳಾವರ ಗ್ರಾಮದ ಗರಗದ್ದೆಯ ಪಂಜುರ್ಲಿ ಹಾಗೂ ಪರಿವಾರ ದೈವಗಳ ದೇವಸ್ಥಾನದ ವಠಾರದಲ್ಲಿ ಡಾ! ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಸೇವಾ ಸಮಿತಿ ಉದ್ಘಾಟನೆಗೊಂಡಿತು. ಸಂವಿಧಾನದ ಪೀಠಿಕೆಯ ಪ್ರಸ್ತಾವನೆ ಓದುವ ಮೂಲಕ ಕುಂದಾಪುರದ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಘಟನೆಯಿಂದ ಸಮಸ್ಯೆಗಳ ಪರಿಹಾರ ಸುಲಭ. ದುಶ್ಟಟಗಳಿಂದ ದೂರವಿರಿ. ಕಾನೂನಿನ ದುರ್ಬಳಕೆ ಮಾಡಬೇಡಿ. ಶಿಕ್ಷಣಕ್ಕೆ ಒತ್ತುಕೊಡಿ ಎಂದು ಕರೆ ನೀಡಿದರು.



ಡಾ! ಬಿ.ಆರ್. ಅಂಬೇಡ್ಕರ್ ಆದಿದ್ರಾವಿಡ ಸಮಾಜದ ಸೇವಾ ಸಮಿತಿಯ ಅಧ್ಯಕ್ಷ ಎಂ. ಪಿ. ಸಂಜೀವ ಮಾಸ್ಟರ್ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಲಿತ ಸಾಹಿತಿ ಹರಿದಾಸ್ ಕೆ.ಕೆ.ಕಾಳಾವರ್ ಮಾತನಾಡಿ, ಸರ್ಕಾರವು ದಲಿತ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಬೇಕು ಎಂದರು. ಸಮಿತಿಯ ಉಪಾಧ್ಯಕ್ಷ ರಘುವೀರ ಕೆ. ಪ್ರಾಸ್ತಾವಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ಬಣ್ಣ ಕೋಣಿ ಅಂಬೇಡ್ಕರ್ ಕುರಿತು ಆಶಯ ಗೀತೆ ಹಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುಪ್ರಿಯಾ ನವೀನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಿ. ಮೋಹನಚಂದ್ರ ಕಾಳಾವರ್ ಕಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ವಿಜೇಂದ್ರ ಎಂ. ವಂದಿಸಿದರು.


