ಕುಂದಾಪುರ: ಶ್ರೀ ವೆಂಕಟರಮಣ ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸಂಪನ್ನ
ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವು ಸಂಸ್ಥೆಯ ಕಾರ್ಯದರ್ಶಿ ಕೆ. ರಾಧಾಕೃಷ್ಣ ಶೆಣೈ ಅಧ್ಯಕ್ಷತೆಯಲ್ಲಿ ಸಂಪನ್ನಗೊಂಡಿತು.

ಕ್ರೀಡಾಪಟುಗಳಿಂದ ಗೌರವ ವಂದನೆ ಸ್ವೀಕರಿಸಿ, ಕ್ರೀಡಾಜ್ಯೋತಿಯನ್ನು ಬೆಳಗಿಸಿದ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ ಜಿ. ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವಿರಬೇಕು, ಸೋಲೇ ಗೆಲುವಿನ ಸೋಪಾನ ಎಂಬ ನುಡಿಯಂತೆ ಪ್ರತಿಯೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಗಾಣಿಗ, ಉಪ ಪ್ರಾಂಶುಪಾಲ ಸುಜಯ್ ಕೋಟೆಗಾರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಅಡಿಗ, ಪ್ರಾಥಮಿಕ ವಿಭಾಗ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿ’ಸೋಜಾ ಮತ್ತು ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿ’ಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ, ಬೋಧಕೇತರ ಸಿಬ್ಬಂಧಿ ಹಾಗೂ ಪೋಷಕರು ಭಾಗವಹಿಸಿದ್ದರು. ಮಕ್ಕಳು ನಡೆಸಿದ ದೈಹಿಕ ಕಸರತ್ತು ಎಲ್ಲರ ಮನಸೂರೆಗೊಂಡಿತು. ವಿದ್ಯಾರ್ಥಿನಿ ಶ್ರೀನಿಧಿ ಪೈ ಕಾರ್ಯಕ್ರಮ ನಿರೂಪಿಸಿ, ಮದೀಹಾ ಮಸೂದ್ ಸ್ವಾಗತಿಸಿದರು. ಆಯುಷ್ ರಾವ್ ವಂದಿಸಿದರು.