ಹೆಬ್ರಿ: ವಿಕ್ರಂ ಗೌಡನ ಹತ್ಯೆ, ಜಯಂತ್ ಗೌಡ ವಿಚಾರಣೆಗೆ ಗ್ರಾಮಸ್ಥರ ವಿರೋಧ
ಹೆಬ್ರಿ: ನಕ್ಸಲ್ ನಾಯಕನೆಂಬ ಹಣೆಪಟ್ಟಿಯೊಂದಿಗೆ ಎಎನ್.ಎಫ್ ಪೊಲೀಸರ ಬಂದೂಕಿನ ಗುಂಡಿನಿಂದ ಕೊಲ್ಲಲ್ಪಟ್ಟ ವಿಕ್ರಂ ಗೌಡನ ಮನೆಯ ಸಮೀಪವಾಸಿ ಜಯಂತ್ ಗೌಡನನ್ನು ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಕ್ಕೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಶುಕ್ರವಾರ ಮುತ್ತಿಗೆ ಹಾಕಿದ್ದಾರೆ.

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಜಯಂತ್ ಗೌಡನನ್ನು ವಿಚಾರಣೆಗಾಗಿ ವಶಕ್ಕೆ ಪಡೆದು ಹೆಬ್ರಿ ಠಾಣೆಗೆ ಕರೆ ತಂದಿದ್ದರು. ಮಾಹಿತಿ ತಿಳಿದ ಗ್ರಾಮಸ್ಥರು ಹೆಬ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಂತ್ ಗೌಡ ಅಮಾಯಕನಾಗಿದ್ದು ಆತನಿಗೆ ಯಾವುದೇ ಮಾಹಿತಿ ತಿಳಿದಿಲ್ಲ. ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದ ಉದ್ಧೇಶವೇನು? ವಿಚಾರಣಗಾಗಿ ಕರೆತಂದಿದ್ದರೆ ಅಲ್ಲಿಯೇ ಎಲ್ಲರ ಸಮ್ಮುಖದಲ್ಲಿ ವಿಚಾರಿಸಬಹುದಿತ್ತಲ್ಲ? ಎಂದು ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಠಾಣಾಧಿಕಾರಿ ಅವರಲ್ಲಿ ಆಕ್ರೋಶ ಹೊರಹಾಕಿದ್ದು, ಆತನನ್ನು ಕೂಡಲೇ ಬಿಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಠಾಣಾಧಿಕಾರಿ ಮಹೇಶ್ ಟಿ. ಮೇಲಾಧಿಕಾರಿಗಳಲ್ಲಿ ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.