ಕುಂದಾಪುರ: ವಲಸೆ ಕಾರ್ಮಿಕರ ಪಡಿತರ ಕೆವೈಸಿಯಲ್ಲಿ ಬಹುಭಾಷಾ ವ್ಯವಸ್ಥೆ ಕಲ್ಪಿಸಿ – ಸಚಿವರಿಗೆ ನಾಗರಿಕ ಹಿತರಕ್ಷಣಾ ವೇದಿಕೆ ಮನವಿ
ಕುಂದಾಪುರ: ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಂದ ವಲಸೆ ಕಾರ್ಮಿಕರಾಗಿ ಆಗಮಿಸುವ ಕಾರ್ಮಿಕರಿಗೆ ತಮ್ಮ ಪಡಿತರ ಕೆ ವೈ ಸಿ ಅಪ್ ಗ್ರೇಡ್ ಮಾಡಲು ಬಹುಭಾಷಾ ವ್ಯವಸ್ಥೆಯನ್ನು ಕಲ್ಪಿಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆ ಹಾಲಾಡಿ ಇದರ ಕಾರ್ಯದರ್ಶಿ ಸೂರ್ಯಪ್ರಕಾಶ್ ದಾಮ್ಲೆ ಆಗ್ರಹಿಸಿದ್ದಾರೆ. ಈ ಸಂಬಂಧ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಹಾರ ಖಾತೆಯ ಸಚಿವ ಕೆಎಚ್ ಮುನಿಯಪ್ಪ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯಪ್ರಕಾಶ್ ದಾಮ್ಲೆ, ಈಗಾಗಲೇ ರಾಜ್ಯ ಸರ್ಕಾರ ಪಡಿತರ ಚೀಟಿಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಮಾಡಲು ಉದ್ದೇಶಿಸಿದ್ದು, ಅದಕ್ಕೆ ಪೂರಕವಾಗಿ ಪಡಿತರ ಕುಟುಂಬದ ಪ್ರತಿ ಸದಸ್ಯರಿಗೂ ಕೆವೈಸಿ ಮಾಡಿಸಬೇಕೆಂಬ ಆದೇಶ ಹೊರಡಿಸಿದೆ. ಆದರೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜೀವನೋಪಾಯಕ್ಕಾಗಿ ಕೂಲಿ ಕೆಲಸಕ್ಕಾಗಿ ಬಂದಿರುವ ಹೊರರಾಜ್ಯಗಳ ಕಾರ್ಮಿಕರು ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಿಂದ ಹೊರ ರಾಜ್ಯಗಳಿಗೆ ಕೂಲಿ ಕೆಲಸಕ್ಕಾಗಿ ಹೋಗಿರುವ ಕಾರ್ಮಿಕರ ಪಡಿತರ ಚೀಟಿಗಳನ್ನು ಕೆವೈಸಿಗೆ ಅಪ್ಡೇಟ್ ಮಾಡಲು ತಂತ್ರಾಂಶದಲ್ಲಿರುವ ಭಾಷೆಯ ತೊಡಕುಂಟಾಗುತ್ತಿದೆ. ಅಸ್ಸಾಂ, ಒರಿಸ್ಸಾ, ಜಾರ್ಖಂಡ್, ಮಣಿಪುರ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರ, ಹೈದರಾಬಾದ್ ಹಾಗೂ ಇನ್ನಿತರ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವವರಿಗೆ ಆಯಾ ರಾಜ್ಯದಿಂದ ತಮ್ಮ ಊರಿಗೆ ಬರಲು ಕಷ್ಟವಾಗುತ್ತಿದೆ. ಅಲ್ಲದೆ ಕೆಲಸದ ಸ್ಥಳದಲ್ಲಿ ಪಡಿತರ ಕೆವೈಸಿ ಅಪ್ಡೇಟ್ ಮಾಡಲು ಭಾಷೆಯ ಸಮಸ್ಯೆ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಡಿತರ ಅಪ್ಡೇಟ್ ತಂತ್ರಾಂಶದಲ್ಲಿ ಎಲ್ಲಾ ಭಾಷೆಗಳಲ್ಲೂ ಅರ್ಜಿ ವಿಲೇವಾರಿಗೆ ಅನುವು ಮಾಡಿಕೊಡಬೇಕು ಹಾಗೂ ಪಡಿತರ ಚೀಟಿ ತಿದ್ದುಪಡಿಗೆ ಒಂದು ಬಾರಿ ಆಹಾರ ನಿರೀಕ್ಷಕರ ಮೂಲಕ ಯಾವುದೇ ಗೊಂದಲವಾಗದೆ ಪಾರದರ್ಶಕವಾಗಿ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.