ದೆಹಲಿ: ಇನ್ಮುಂದೆ ನ್ಯಾಯದೇವತೆ ಕಣ್ಣಿಗೆ ಪಟ್ಟಿ, ಕೈಗೆ ಖಡ್ಗ ಇಲ್ಲ! ಹೊಸ ರೂಪ ಕೊಟ್ಟ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್!
ನವದೆಹಲಿ: ಇದುವರೆಗೆ ನ್ಯಾಯಾಲಯಗಳಲ್ಲಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಖಡ್ಗ ಹಿಡಿದು ನಿಂತಿದ್ದ ನ್ಯಾಯದೇವತೆ ಇವೆರಡನ್ನೂ ಕಿತ್ತು ಬೀಸಾಕಿ ಕಣ್ಬಿಟ್ಟು ನೋಡಲಿದ್ದಾಳೆ. ಖಡ್ಗದ ಬದಲಿಗೆ ಸಂವಿಧಾನದ ಪುಸ್ತಕ ಹಿಡಿಯಲಿದ್ದಾಳೆ ಎಂದು ಆಲ್ ಇಂಡಿಯಾ ರೇಡಿಯೋ ವರದಿ ಮಾಡಿದೆ. ಇನ್ಮುಂದೆ ಬಲ ಕೈಯಲ್ಲಿ ನ್ಯಾಯದ ತಕ್ಕಡಿ, ಎಡ ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯದೇವತೆಯ ಮೂರ್ತಿ ಕಾಣಸಿಗಲಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಭಾರತ ಬ್ರಟಿಷರ ದಾಸ್ಯದಲ್ಲಿದ್ದ ಪ್ರತೀಕವಾಗಿ ಈ ಹಿಂದೆ ಇದ್ದ ನ್ಯಾಯದೇವತೆಯ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಲಾಗಿತ್ತು. ಸಂಪತ್ತು, ಅಧಿಕಾರ, ಸ್ಥಾನಮಾನವನ್ನು ನೋಡದೇ ಎಲ್ಲರಿಗೂ ಸಮಾನ ನ್ಯಾಯವನ್ನು ದೊರಕಬೇಕು ಎಂಬ ಆಶಯವನ್ನು ಇದು ಸೂಚಿಸುವ ವ್ಯಾಖ್ಯಾನ ನೀಡಲಾಗಿತ್ತು. ಅಲ್ಲದೇ ಒಂದು ಕೈಯಲ್ಲಿ ತಕ್ಕಡಿ ಹಿಡಿದರೆ ಮತ್ತೊಂದು ಕೈಯಲ್ಲಿ ಖಡ್ಗವಿತ್ತು. ಇದೀಗ ಹಳೆಯ ನ್ಯಾಯದೇವತೆಯ ಮೂರ್ತಿಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿರುವ ಹೊಸ ನ್ಯಾಯದೇವತೆಯ ಹೊಸ ಪ್ರತಿಮೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಖಡ್ಗ ಹಿಡಿದಿರುವ ಕೈಯಲ್ಲಿ ಸಂವಿಧಾನ ಪ್ರತಿಯಿದೆ. ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯಲಾಗಿದೆ ಎಂದು ಆಲ್ ಇಂಡಿಯಾ ರೇಡಿಯೊ ವರದಿ ಮಾಡಿದೆ.
ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಭಾರತ ಮುಂದುವರಿಯಬೇಕಾಗಿದೆ. ನ್ಯಾಯದೇವತೆ ಕುರುಡಲ್ಲ, ಅವಳು ಎಲ್ಲರನ್ನು ಸಮಾನವಾಗಿ ನೋಡುತ್ತಾಳೆ ಎಂಬ ಸಂದೇಶವನ್ನು ರವಾನಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಬದಲಾವಣೆಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
