*ವಿಧಾನಪರಿಷತ್ ಉಪಚುನಾವಣೆಯಲ್ಲಿ ಅಕ್ರಮದ ವಾಸನೆ! ಅರ್ಹತೆ ಇಲ್ಲದವರಿಗೆ ಅಧಿಕಾರ ಕೊಟ್ಟರೇ ಚುನಾವಣಾಧಿಕಾರಿ!?*
ಕುಂದಾಪುರ: ಭಾರತದ ಚುನಾವಣಾ ಆಯೋಗದ ಅಧಿಸೂಚನೆಯಂತೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಉಪಚುನಾವಣೆ 2024ರಲ್ಲಿ ಚುನಾವಣಾ ತಂಡಗಳ ರಚನೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಚುನಾವಣಾ ಪ್ರಕ್ರಿಯೆಗಳ ಪೂರ್ವಸಿದ್ಧತೆ ಹಾಗೂ ಚುನಾವಣಾ ಅಧಿಸೂಚನೆ ಪ್ರಕಟಣೆ ನಂತರ ನಡೆಸಬೇಕಾದ ಚುನಾವಣಾ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ನಡೆಸಲು ಆಯ್ಕೆ ಮಾಡಲಾದ ಅಧಿಕಾರಿಗಳ ತಂಡದಲ್ಲಿ ಅರ್ಹತೆಯೇ ಇಲ್ಲದವರಿಗೆ ಹುದ್ದೆ ನೀಡುವ ಮೂಲಕ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ

ಈ ಹಿಂದೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಬಿ ಆರ್ ಸಿ ಆಗಿದ್ದ ಕರುಣಾಕರ ಶೆಟ್ಟಿ ಎಂಬ ಶಿಕ್ಷಕ ಬಳಿಕ ನಾವುಂದದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸಹಾಯಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ವಿಧಾನಪರಿಷತ್ ಉಪಚುನಾವಣೆಯ ಸಂದರ್ಭ ಈ ಸಹಾಯಕ ಶಿಕ್ಷಕನಿಗೆ ಎರಡೆರಡು ಹುದ್ದೆಗಳನ್ನು ನೀಡಲಾಗಿದೆ! ವಿಶೇಷವೆಂದರೆ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ಚುನಾವಣಾ ಅಧಿಕಾರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ ಸೆಕ್ಟರ್ ಆಫೀಸರ್ ಆಗಿ ಕರುಣಾಕರ ಶೆಟ್ಟಿಯನ್ನು ಆಯ್ಕೆ ಮಾಡಿದ್ದಲ್ಲದೆ, ತರಬೇತಿದಾರನನ್ನಾಗಿಯೂ ನೇಮಿಸಲಾಗಿದೆ! ಈ ಸಂದರ್ಭ ಅವರನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂದು ಸುಳ್ಳು ಹುದ್ದೆಯನ್ನು ನಮೂದಿಸಲಾಗಿದೆ.

ಇನ್ನೊಂದು ಆದೇಶವನ್ನು ಸಹಾಯಕ ಚುನಾವಣಾ ಅಧಿಕಾರಿಯಾಗಿರುವ ಉಡುಪಿಯ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿಎಸ್ ಅವರು, ಪಿಆರ್ಓ ಮತ್ತು ಎಪಿಆರ್ಓ ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದು ಅದರಲ್ಲಿಯೂ ಇದೇ ಸಹಾಯಕ ಶಿಕ್ಷಕ ಕರುಣಾಕರ ಶೆಟ್ಟಿಯ ಹುದ್ದೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಎಂದು ಸುಳ್ಳು ಹೇಳಲಾಗಿದೆ.

ಈ ಎರಡು ಆದೇಶಗಳಲ್ಲಿ ಸರ್ಕಾರಿ ಪ್ರೌಢಶಾಲೆಯೊಂದರ ಸಹಾಯಕ ಶಿಕ್ಷಕ ಕರುಣಾಕರ ಶೆಟ್ಟಿಯನ್ನು ವೈಭವೀಕರಿಸಿ ಒಂದು ಆದೇಶದಲ್ಲಿ ಸಹಾಯಕ ಪ್ರೊಫೆಸರ್ ಎಂತಲೂ, ಮತ್ತೊಂದು ಆದೇಶದಲ್ಲಿ ಉಪನ್ಯಾಸಕ ಎಂಬುದಾಗಿ ನಮೂದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೇಲ್ನೋಟಕ್ಕೆ ಕರುಣಾಕರ ಶೆಟ್ಟಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಬಯಲಾಗಿದ್ದು ಚುನಾವಣಾ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ಅಧಿಕಾರಿಗಳು ಹೊರಡಿಸಿದ ಆದೇಶದಲ್ಲಿ ಮತ್ತೆ ಅದೆಷ್ಟು ಅಕ್ರಮಗಳು ನಡೆದಿದೆಯೋ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.
ಒಂದು ವೇಳೆ ಅಧಿಕಾರದ ಆಸೆಯಿಂದ ಚುನಾವಣಾ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದರೆ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಅಥವಾ ಚುನಾವಣಾ ಅಧಿಕಾರಿಗಳೇ ಅಕ್ರಮ ನಡೆಸಿದ್ದರೆ ವಿಧಾನಪರಿಷತ್ತಿನ ಉಪಚುನಾವಣೆಯ ಪ್ರಕ್ರಿಯೆಗಳ ಪಾರದರ್ಶಕತೆಯ ಮೇಲೆ ಅನುಮಾನ ಮೂಡಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.