ಕುಂದಾಪುರ: ಮುಖ್ಯ ರಸ್ತೆಯಲ್ಲಿರುವ ರೋಡ್ ಹಂಪ್ ನಿರ್ವಹಣೆಗೆ ಆಗ್ರಹಿಸಿ ಪ್ರತಿಭಟನೆ
ಕುಂದಾಪುರ: ಪುರಸಭಾ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿರುವ ರೋಡ್ ಹಂಪ್ ಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ತೊಂದರೆಯಾಗುತ್ತಿದ್ದರೂ ಕುಂದಾಪುರ ಪುರಸಭೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಜನಪ್ರತಿನಿಧಿಗಳಂತೂ ಗಾಢ ನಿದ್ರೆಯಲ್ಲಿದ್ದರೆ ಹೊಸದಾಗಿ ಬಂದ ಮುಖ್ಯಾಧಿಕಾರಿಗಳು ಪುರಸಭೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದಕ್ಕಿನ್ನೂ ಸಮಯ ಹಿಡಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಕುಂದಾಪುರ ತಾಲೂಕು ಆಸ್ಪತ್ರೆ ಸಮೀಪ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಸ್ತೆ ಉಬ್ಬುಗಳ ಸಮರ್ಪಕ ನಿರ್ವಹಣೆಯಿಲ್ಲದೇ ಆಗುತ್ತಿರುವ ತೊಂದರೆಗಳ ಕುರಿತು ಪುರಸಭೆ ಮುಖ್ಯಾಧಿಕಾರಿಗಳ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತರಲಾಯಿತು.

ತಕ್ಷಣವೇ ಪುರಸಭೆ ರಸ್ತೆ ಹಂಪ್ ಗಳನ್ನು ಸರಿಯಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ರೋಡ್ ಹಂಪ್ ಹಾಳಾದರೂ ಮೌನ ವಹಿಸಿದ ಪುರಸಭೆಯ ಮುಖ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಹಂಪ್ ಗಳಿಂದ ಯಾವುದೇ ರೀತಿಯಿಲ್ಲಿ ಅಪಘಾತಗಳಾದರೆ ಅದಕ್ಕೆ ಪುರಸಭೇ ನೇರ ಹೊಣೆಯಾಗುತ್ತದೆ. ತಕ್ಷಣ ಕಾರ್ಯಪ್ರವೃತ್ತವಾಗದೇ ಇದ್ದರೆ ಮುಮದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ದಲಿತ ಮುಖಂಡ ಉದಯ ಕುಮಾರ್ ತಲ್ಲೂರು ಆಗ್ರಹಿಸಿದರು.

ಕುಂದಾಫುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಮಾತನಾಡಿ, ರಥೋತ್ಸವ ಸಂದರ್ಭ ಇದ್ದ ರಸ್ತೆ ಹಂಪ್ ಗಳನ್ನು ಅಗೆದು ಹಾಕಲಾಗಿದ್ದು, ಇಷ್ಟು ಸಮಯವಾದರೂ ದುರಸ್ತಿ ಮಾಡಿಲ್ಲ. ಹಲವಾರು ವರದಿಗಳನ್ನು ಪ್ರಕಟಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಇನ್ನಾದರೂ ಪುರಸಭೆ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತವಾಗಬೇಕು ಎಂದರು.

ಪ್ರತಿಭಟನಾಕಾರರಿಗೆ ಸಮಜಾಯಿಸಿ ನೀಡಿದ ಪುರಸಭೆಯ ಮುಖ್ಯಾಧಿಕಾರಿ ಆನಂದ, ಈಗಾಗಲೇ ಈಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ವಿಳಂಬವಾಗುತ್ತಿದೆ ಎಂದರು. ಪತ್ರಕರ್ತರ ಸಂಘದ ಸದಸ್ಯರು, ಸ್ಥಳೀಯ ಸಂಚಾರ ನಡೆಸುವ ಮೂರು ರಿಕ್ಷಾ ಚಾಲಕರ ಸಂಘಟನೆಗಳು, ಕುಂದಾಪುರ ಛಾಯಾಗ್ರಾಹಕರ ಸಂಘಟನೆಗಳು, ಸಾರ್ವಜನಿಕರು ಭಾಗವಹಿಸಿದ್ದರು, ಪುರಸಭೆ ಸದಸ್ಯ ಗಿರೀಶ್ ಜಿಕೆ. ಮೊದಲಾದವರು ಇದ್ದರು.