ದೇಹ ಸಿಕ್ಕಿ ದಿನ ಮೂರು ಕಳೆದರೂ ಪತ್ತೆಯಾಗದ ರುಂಡ! – ಸಾವಿನ ಸುತ್ತ ಅನುಮಾನದ ಹುತ್ತ!?

ಕುಂದಾಪುರ: ನಾಪತ್ತೆಯಾಗಿ ಗುಜ್ಜಾಡಿ ಗ್ರಾಮದ ಕಳಿಹಿತ್ಲುವಿನ ಪಂಚಗಂಗಾವಳಿ ಹೊಳೆಯಲ್ಲಿ ರುಂಡವಿಲ್ಲದ ಶವವಾಗಿ ಪತ್ತೆಯಾಗಿದ್ದ ವೃದ್ಧರ ರುಂಡ ಮಾತ್ರ ಮುಂಡ ಪತ್ತೆಯಾಗಿ ಮೂರು ದಿನ ಕಳೆದರೂ ಪತ್ತೆಯಾಗಿಲ್ಲ.
ಗಂಗೊಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗುಡ್ಡಮ್ಮಾಡಿ ಗ್ರಾಮದ ಕರುಣಾಕರ ಶೆಟ್ಟಿ (72) ಅವರ ಮೃತದೇಹವು ಶನಿವಾರ ರುಂಡವಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಅವರ ಮೃತದೇಹದ ರುಂಡ ಪತ್ತೆಯಾಗದ ಹಿನ್ನೆಲೆ ನಿನ್ನೆಯೂ ರುಂಡಕ್ಕಾಗಿ ಗಂಗೊಳ್ಳಿ ಠಾಣಾ ಪೊಲೀಸರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಗಂಗೊಳ್ಳಿ ಎಸ್ಐ ಹರೀಶ್ ಆರ್. ಮಾರ್ಗದರ್ಶನದಲ್ಲಿ ಸಿಬ್ಬಂದಿಯ ಸಹಕಾರದೊಂದಿಗೆ ಸ್ಥಳೀಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಕರುಣಾಕರ ಶೆಟ್ಟಿ ಅವರ ರುಂಡಕ್ಕಾಗಿ ಹುಡುಕಾಟ ನಡೆಸಲಾಯಿತು. ಸ್ಥಳೀಯ ಮೀನುಗಾರರು ಸಹ ಭಾಗಿಯಾಗಿದ್ದರು. ದೋಣಿಯ ಮೂಲಕವೂ ರುಂಡಕ್ಕಾಗಿ ಶೋಧ ಕಾರ್ಯಾಚರಣೆ ನಡೆಯಿತು.
ಇದೆಲ್ಲದರ ನಡುವೆ ವೃದ್ಧರ ದೇಹದಿಂದ ತಲೆ ಹೇಗೆ ಬೇರೆ ಆಯಿತು ಎನ್ನುವ ಕೂತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಕೊಲೆ ಮಾಡಿ ರುಂಡವನ್ನು ಬೇರೆಡೆ ಬಿಸಾದಿರಬಹುದೇ? ಆಸ್ತಿಗಾಗಿ ಯಾರಾದರೂ ಕೊಲೆ ಮಾಡಿಸಿರಬಹುದೇ? ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದಕ್ಕೆ ಯಾವ ಕಾರಣಗಳಿವೆ? ಆರ್ಥಿಕವಾಗಿ ಸದೃಢರಾಗಿದ್ದ ಕರುಣಾಕರ ಶೆಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಯಾಕೆ ಬಂತು ಎನ್ನುವ ಅನುಮಾನಗಳೂ ಸ್ಥಳೀಯರನ್ನು ಕಾಡತೊಡಗಿದೆ.