BlogCrime newsGovernmentHighlightsHuman storiesLocal newsOthersPoliticsProtestState newsTop StoriesTrending

ಕುಂದಾಪುರ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪುರಸಭೆಯಲ್ಲಿ ಟೆಂಡರ್ ಗೋಲ್ಮಾಲ್ ವಾಸನೆ!

Aware others:

ಸರ್ಕಾರದ ಬೊಕ್ಕಸ ನಷ್ಟಕೆ  ಯತ್ನಿಸಿತಾ ಕುಂದಾಪುರ ಪುರಸಭೆ?

ಕುಂದಾಪುರ: ರಾಷ್ಟ್ರ ಪ್ರಶಸ್ತಿ ವಿಜೇತ ಕುಂದಾಪುರ ಪುರಸಭೆಯಲ್ಲಿ ಕಳೆದ 17 ತಿಂಗಳಿಂದ ಅಧ್ಯಕ್ಷ ಉಪಾಧ್ಯಕ್ಷರಿಲ್ಲದೆ ಅಧಿಕಾರಿಗಳ ಆಡಳಿತ ವ್ಯವಸ್ಥೆಯಲ್ಲಿ ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದ ಪುರಸಭೆಯ ಜನರಿಗೆ ಆಶಾದಾಯಕವೆಂಬಂತೆ ಇತ್ತೀಚೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಆದರೆ ಪುರಸಭೆಯ ಸರ್ಕಾರ ರಚನೆಯಾದ ಬಳಿಕ ಮಂಜೂರಾದ 15ನೇ ಹಣಕಾಸು ಅನುದಾನದಲ್ಲಿ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

15ನೇ ಹಣಕಾಸು ಅಡಿಯಲ್ಲಿ ಪ್ರತಿ ವಾರ್ಡಿಗೂ ಎರಡುವರೆ ಲಕ್ಷ ರೂಪಾಯಿಯಂತೆ ಪುರಸಭೆಯ 23 ವಾರ್ಡುಗಳಿಗೆ ಅನುದಾನ ಬಿಡುಗಡೆಯಾಗಿತ್ತು. ಸಾಮಾನ್ಯವಾಗಿ ಆನ್ಲೈನ್ ಟೆಂಡರ್ ನಡೆಸುವಾಗ ಗುತ್ತಿಗೆದಾರರು ನಿಗದಿತ ಮೊತ್ತಕ್ಕಿಂತ (ಎಸ್ ಆರ್ ರೇಟ್) ಕಡಿಮೆ ಮೊತ್ತವನ್ನು ನಮೂದಿಸಿ ಟೆಂಡರ್ ನಲ್ಲಿ ಭಾಗವಹಿಸುತ್ತಾರೆ. ಆದರೆ ನೂತನವಾಗಿ ಮೂರನೇ ಬಾರಿಗೆ ಆಯ್ಕೆಯಾದ ಅಧ್ಯಕ್ಷ ಮೋಹನ ದಾಸ್ ಶೆಣೈ ಅವರು ಗುತ್ತಿಗೆದಾರರಿಗೆ ಎಸ್ ಆರ್ ರೇಟಿನಲ್ಲಿ ಟೆಂಡರ್ ಹಾಕುವಂತೆ ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ. 

ಅಲ್ಲದೆ ಪುರಸಭೆಯ ಮುಖ್ಯ ಅಧಿಕಾರಿ ಹಾಗೂ ಅಭಿಯಂತರರಿಗೆ ಮಾಹಿತಿ ನೀಡದೆ ಅಲ್ಲದೆ ಪುರಸಭೆಯ ಸದಸ್ಯರಿಗೂ ಮಾಹಿತಿ ನೀಡದೆ ಸೆಪ್ಟಂಬರ್ 4ರಂದು ಸಂಜೆ 5:00 ಗಂಟೆಗೆ ಪುರಸಭೆಯ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಗುಪ್ತವಾಗಿ ಸಭೆ ಕರೆದು ಗುತ್ತಿಗೆದಾರರಿಗೆ ಒತ್ತಡ ಹೇರಿದ್ದು, ಈ ರಹಸ್ಯ ಸಭೆಯಲ್ಲಿ ಎಸ್ಆರ್ ರೇಟಿಗಿಂತ ಕಡಿಮೆ ಮೊತ್ತವನ್ನು ನಮೂದಿಸಿದರೆ ಅಂಥವರನ್ನು ಡಿಸ್ ಕ್ವಾಲಿಫೈ ಮಾಡುವುದಾಗಿ ಗುತ್ತಿಗೆದಾರರನ್ನು ಹೆದರಿಸಿದ್ದಾರೆ ಎನ್ನಲಾಗಿದೆ. ಬಳಿಕ ಸೆಪ್ಟೆಂಬರ್ ಐದರಂದು ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಅಧ್ಯಕ್ಷರು ತಮಗೆ ಬೇಕಾದವರಿಗೆ ಅನುಕೂಲವಾಗುವಂತೆ ಟೆಂಡರ್ ಗೋಲ್ಮಾಲ್ ನಡೆಸಿದ್ದಾರೆ ಎಂದು ಪುರಸಭೆಯ ಕೆಲವು ಸದಸ್ಯರು ಆರೋಪಿಸಿದ್ದಾರೆ. ಅಲ್ಲದೆ ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಅಧ್ಯಕ್ಷ ಮೋಹನದಾಸ್ ಶೆಣೈ ರಾಜಿನಾಮೆಗೆ ಆಗ್ರಹಿಸಿದ್ದಾರೆ.

ಅಧ್ಯಕ್ಷರ ಈ ನಡೆಯಿಂದ 15ನೇ ಹಣಕಾಸು ಅನುದಾನದಲ್ಲಿ ಸುಮಾರು 20 ಲಕ್ಷ ರೂಪಾಯಿಗಳಷ್ಟು ಸರಕಾರಕ್ಕೆ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೂ ಅಧ್ಯಕ್ಷರು ಗುತ್ತಿಗೆದಾರರಿಗೆ ಈ ರೀತಿಯ ಬೆದರಿಕೆ ಹಾಕಿರುವುದು ಯಾಕೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ತಮಗೆ ಬೇಕಾದವರಿಗೆ ಗುತ್ತಿಗೆ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶ ಅಡಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪುರಸಭೆಯ ಮುಖ್ಯ ಅಧಿಕಾರಿಯವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಈ ಹಿಂದೆ ಪುರಸಭೆಯಲ್ಲಿ ಸರ್ಕಾರ ಇಲ್ಲದ ಕಾರಣ ಜನ ಸಾಮಾನ್ಯರು ತಮ್ಮ ಮೂಲಭೂತ ಸೌಕರ್ಯ, ಕುಂದುಕೊರತೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಹತ್ತಿರ ಹೇಳಿದರೂ, ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ, ಸಾಮಾನ್ಯ ಸಭೆ ನಡೆಯದೆ ತಮ್ಮ ವಾರ್ಡಿನ ಕೆಲಸಗಳನ್ನು ಮಾಡಲು ಅಧಿಕಾರಿಗಳ ಹತ್ತಿರ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಇದೀಗ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದ ಬಳಿಕ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಸಾರ್ವಜನಿಕ ಕ್ಷೇತ್ರದಲ್ಲಿ ಮೂಡಿದೆ. ಅಲ್ಲದೆ ಅಭಿವೃದ್ಧಿಯ ಹೆಸರಿನಲ್ಲಿ ಗೋಲ್ಮಾಲ್ ನಡೆಸಲು ಯತ್ನಿಸಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಕೂಗು ಕೇಳುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಪುರಸಭೆಯ ಮೂಲಭೂತ ಸಮಸ್ಯೆಗಳ ಅಭಿವೃದ್ಧಿಗೆ ಸರಕಾರದ ಅನುದಾನವನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳುವಲ್ಲಿ ಪ್ರಯತ್ನಿಸುವರೇ ಕಾದು ನೋಡಬೇಕಾಗಿದೆ.

ವಿಕಾಸ್ ಹೆಗ್ಡೆ ಹೇಳಿಕೆ

Aware others:

Leave a Reply

Your email address will not be published. Required fields are marked *

error: Content is protected !!