ಬೈಂದೂರು: ಪ್ರೋಟೋಕಾಲ್ ಉಲ್ಲಂಘನೆ – ತಹಶಿಲ್ದಾರ್ ಗೆ ನೋಟೀಸ್

ಬೈಂದೂರು: ಸರ್ಕಾರೀ ಪ್ರೋಟೋಕಾಲ್ ಉಲ್ಲಂಘನೆ ಮಾಡಲಾಗಿದೆ ಎಂಬ ಕಾರಣಕ್ಕೆ ಬೈಂದೂರು ತಹಸೀಲ್ದಾರ್ ಪ್ರದೀಪ್ ಅವರಿಗೆ ಮೇಲಧಿಕಾರಿಗಳು ನೋಟೀಸು ಜ್ಯಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಬೈಂದೂರು ತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ತಾಲೂಕು ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರೀ ಪ್ರೋಟೋಕಾಲ್ ನಿಯಮದಂತೆ ಆ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸಬೇಕಿತ್ತು. ಆದರೆ ಬೈಂದೂರು ತಹಸೀಲ್ದಾರ್ ಶಾಸಕರಿಗೆ ಆಹ್ವಾನಿಸದೇ ಇರುವ ಕಾರಣಕ್ಕೆ ಶಾಸಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ತಾಲೂಕು ಮಟ್ಟದ ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರು ಸಹಿತ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು ಶಿಷ್ಠಾಚಾರವಾಗಿದೆ. ಆದರೆ, ಈ ಬಾರಿ ಶಾಸಕರಿಗೆ ಆಹ್ವಾನ ನೀಡದೇ ಕಾರ್ಯಕ್ರಮ ನಡೆಸಿರುವ ಬಗ್ಗೆ ಶಾಸಕರು ಹಕ್ಕು ಚ್ಯುತಿಯಾಗಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ತಹಸೀಲ್ದಾರ್ ಪ್ರದೀಪ್ ಅವರಿಗೆ ಕಾರಣ ಕೇಳಿ ನೋಟೀಸು ಜ್ಯಾರಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.