BlogElectionGovernmentHighlightsLocal newsNational NewsOthersPoliticsState newsTop StoriesTrending

ಕುಂದಾಪುರ: ಬಿಜೆಪಿಯೊಳಗೆ ಪೈಪೋಟಿ – ಹಳೆ ಹುಲಿಗೆ ಹೊಸಬರ ಟಾಂಗ್ !

Aware others:

ವರ್ಷದ ಬಳಿಕ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ

ಕುಂದಾಪುರ: ಬರೋಬ್ಬರಿ ಆರು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬೀಗಿ ಮೊದಲ ಅವಧಿಗೆ ಅಧಿಕಾರ ಸ್ವೀಕರಿಸಿದ ಬಳಿಕ ವರ್ಷವಿಡೀ ಅಧಿಕಾರವಿಲ್ಲದೇ ರೆಕ್ಕೆ ಕತ್ತರಿಸಿದ ಹಕ್ಕಿಗಳಂತಿದ್ದ ಕುಂದಾಪುರದ ಪುರಸಭೆಯ ಸದಸ್ಯರಿಗೆ ವರ್ಷದ ಬಳಿಕ ರಾಜ್ಯ ಸರ್ಕಾರ ಆಡಳಿತದ ಅವಕಾಶ ನೀಡಿದೆ. ಆ ಮೂಲಕ ನಾಳೆ ಅಂದರೆ ಗುರುವಾರ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 23 ಸದಸ್ಯ ಸ್ಥಾನಗಳನ್ನು ಹೊಂದಿರುವ ಕುಂದಾಪುರ ಪುರಸಭೆಯ ಮಟ್ಟಿಗೆ 14 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದ್ದು, ಬಹುತೇಕ ಅಧ್ಯಕ್ಷ ಉಪಾಧ್ಯಕ್ಷರಾಗಿ ಬಿಜೆಪಿ ಮೇಲುಗೈ ಸಾಧಿಸುವ ಲೆಕ್ಕಾಚಾರವಿದೆ. 

ಮಾಜೀ ಅಧ್ಯಕ್ಷ ಮೋಹನದಾಸ್ ಶೆಣೈ
ಸಾಮಾನ್ಯ ಸಭೆಯ ಫೈರ್ ಬ್ರ್ಯಾಂಡ್ ಗಿರೀಶ್ ಜಿ.ಕೆ
ಬಿಜೆಪಿ ತಳಮಟ್ಟದಿಂದ ಬೆಳೆದು ಬಂದ ಸಂತೋಷ್ ಶೆಟ್ಟಿ
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಕಾಂಕ್ಷಿ ಚಂದ್ರಶೇಖರ್ ಖಾರ್ವಿ

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಘೋಷಣೆಯಾಗಿದೆ. ಇದರ ಹಿನ್ನೆಲೆಯಲ್ಲಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗಧಿಯಾದಲ್ಲಿಂದ ಬಿಜೆಪಿಯಲ್ಲಿನ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಈ ಹಿಂದೆ ನಾಲ್ಕು ಬಾರಿ ಪುರಸಭೆಯ ಸದಸ್ಯರಾಗಿ, ಎರಡು ಬಾರಿ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮೋಹನದಾಸ ಶೆಣೈ ಅವರು ಮೂರನೇ ಬಾರಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ. ಈ ಬಗ್ಗೆ ಮಾಜೀ ಅಧ್ಯಕ್ಷ ಮೋಹನದಾಸ ಶೆಣೈ ಆಪ್ತ ವಲಯದಲ್ಲಿ ಒಂದು ಸುತ್ತಿನ ಮಾತುಕತೆಗಳು ನಡೆದಿದೆಯೆನ್ನಲಾಗಿದೆ. ಆದರೆ ಮೋಹನದಾಸ ಶೆಣೈ ಮಾತ್ರ ತಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎನ್ನುತ್ತಿದ್ದಾರೆ. ಇತ್ತ ಬಿಜೆಪಿಯ ಹೊಸ ಹುರುಪಿನ ಸದಸ್ಯರು ಮೋಹನದಾಸ ಶೆಣೈ ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. ಮತ್ತೆ ಪುನಃ ಅವರೇ ಅಧ್ಯಕ್ಷರಾಗುವುದಾದರೆ ಹೊಸ ಮುಖಗಳಿಗೆ ಅವಕಾಶ ಯಾವಾಗ? ಎನ್ನುವ ಪ್ರಶ್ನೆ ಎತ್ತುತ್ತಿದ್ದಾರೆ. ಮೋಹನದಾಸ್ ಶೆಣೈಯವರಿಗೆ ಪ್ರಬಲ ಪೈಪೋಟಿ ನೀಡಲು ಮಾಜೀ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ಬಲಗೈ ಬಂಟನಂತಿದ್ದ ಪ್ರಸ್ತುತ ಪುರಸಭೆಯ ಸದಸ್ಯರಾಗಿರುವ ಸಂತೋಷ್ ಶೆಟ್ಟಿ ತೊಡೆ ತಟ್ಟಿ ನಿಂತಿದ್ದರೆ, ಬಿಜೆಪಿಯ ಇನ್ನೊಬ್ಬ ಸದಸ್ಯ ಪ್ರತೀ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಶ್ನೆಗಳನ್ನೆತ್ತುತ್ತಾ ಸುದ್ಧಿಯಲ್ಲಿರುವ ಗಿರೀಶ್ ಜಿ.ಕೆ ಅಧ್ಯಕ್ಷ ಸ್ಥಾನದ ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 

ಕುಂದಾಪುರ ಪುರಸಭೆ

ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 23 ಸ್ಥಾನಗಳಿವೆ. ಅದರಲ್ಲಿ 8 ಕಾಂಗ್ರೆಸ್ ಸದಸ್ಯರು ಹಾಗೂ 1 ಪಕ್ಷೇತರ ಸದಸ್ಯ. 14 ಜನ ಬಿಜೆಪಿ ಸದಸ್ಯರಿದ್ದಾರೆ. ಕುಂದಾಪುರ ಶಾಸಕರು ಹಾಗೂ ಸಂಸದರು ಸೇರಿದಂತೆ ಇಬ್ಬರಿಗೆ ಮತದಾನದ ಅವಕಾಶವಿದೆ. ಹಾಗಾಗಿ ಒಟ್ಟು 25 ಮತದಾರರಿದ್ದಾರೆ. ಇದೀಗ 14 ಸ್ಥಾನಗಳನ್ನು ಹೊಂದಿರುವ ಬಿಜೆಪಿ ನಡುವೆ ಪೈಪೋಟಿ ಆರಂಭಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್ಸೂ ಸುಮ್ಮನೇ ಕೈಕಟ್ಟಿ ಕುಳಿತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹಿರಿಯ ಸದಸ್ಯ ಚಂದ್ರಶೇಖರ್ ಖಾರ್ವಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ಅಧಿಕೃತವಾಗಿ ಸೂಚಿಸಿದೆ ಎನ್ನಲಾಗಿದೆ. 

ಕುಂದಾಪುರ ಪುರಸಭೆ

ಇತ್ತ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಮೋಹನದಾಸ ಶೆಣೈ ನಾಲ್ಕು ಬಾರಿ ಸದಸ್ಯರಾಗಿ ಅನುಭವ ಹೊಂದಿದ್ದಾರೆ. ಅಲ್ಲದೇ ಪುರಸಭೆಯ ಹಿರಿಯ ಸದಸ್ಯರೂ ಹೌದು. ಅವರ ಅಧಿಕಾರಾವಧಿಯಲ್ಲಿ ಆರಂಭಗೊಂಡಿದ್ದ ಯುಜಿಡಿ ಯೋಜನೆ ಸಂಪೂರ್ಣ ಹಳ್ಳ ಹಿಡಿದಿರುವುದು ಬಿಜೆಪಿಯೊಳಗಿನ ಅಸಮಾಧಾನಕ್ಕೆ ಬಹುದೊಡ್ಡ ಕಾರಣ ಎನ್ನಲಾಗಿದೆ. ಆದರೆ ಅವರೇ ಹೇಳಿದಂತೆ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗದೇ ಯಾವುದೇ ಸದಸ್ಯರು ಬಂಡಾಯ ಸ್ಪರ್ಧೆಗಿಳಿದರೆ ಆಗ ಅದರ ಲಾಭ ಕಾಂಗ್ರೆಸ್ಸಿಗೆ ಆದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ರಾಜಕೀಯ ತಜ್ಞರು.


Aware others:

Leave a Reply

Your email address will not be published. Required fields are marked *

error: Content is protected !!