ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ‘ಎತ್ತಿದ ಕೈ’ ಗುರುರಾಜ್ ಗಂಟಿಹೊಳೆ – ಅತೀ ಹೆಚ್ಚು ಪ್ರಶ್ನೆ ಕೇಳಿ ಉತ್ತರ ಪಡೆದ ಬೈಂದೂರು ಶಾಸಕ
ಕುಂದಾಪುರ: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದ ಶಾಸಕ ಎನ್ನುವ ಹೆಮ್ಮೆಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪಾತ್ರರಾಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಮೋದನೆ ಗೊಂಡ ಕಾಲುಸಂಕ ಕಾಮಗಾರಿಗಳನ್ನು ಮುಂದುವರಿಕೆಗಳ ಬಗ್ಗೆ, ಜಲ ಸಂಪನ್ಮೂಲ ಇಲಾಖೆಯ 2022 -23ರಲ್ಲಿ ಅನುಮೋದನೆಗೊಂಡು ಪ್ರಸ್ತುತ ತಡೆ ಹಿಡಿದಿರುವ ಬೈಂದೂರು ವಾರಾಹಿ ಕಾಲುವೆ ದುರಸ್ಥಿ ಬಗ್ಗೆ, ಬಸವ ವಸತಿ ಯೋಜನೆಯಲ್ಲಿ ಮನೆ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಗಳ ಶಂಕೆಯ ಬಗ್ಗೆ, ಗೋ ಹತ್ಯೆ, ಗೋವುಗಳ ಅಕ್ರಮ ಸಾಗಾಟ ಮತ್ತು ಕಳ್ಳತನ ತಡೆಗಟ್ಟುವಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ, ಬೈಂದೂರು ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಬಸ್ ಓಡಿಸಲು ಕೈಗೊಂಡಿರುವ ಬಗ್ಗೆ, ಮರವಂತೆ ಬೀಚ್ ಪಾರ್ಕಿಂಗ್ ಸೌಲಭ್ಯದ ಬಗ್ಗೆ, ಸಿದ್ಧಾಪುರ ಏತ ನೀರಾವರಿ ಟೆಂಡರ್ ಹಂಚಿಕೆ ಬಗ್ಗೆ, ಪಶು ವೈದ್ಯಾಧಿಕಾರಿಗಳ ಗಳ ಹುದ್ದೆಯ ನೇಮಕಾತಿ ಬಗ್ಗೆ, ಹೈನುಗಾರರರಿಗೆ ಪಾವತಿಗೆ ಬಾಕಿ ಇರುವ ಪ್ರೋತ್ಸಾಹ ಧನ ಪಾವತಿ ಬಗ್ಗೆ ಹೀಗೇ ಅತೀ ಹೆಚ್ಚು ಚುಕ್ಕೆ ಪ್ರಶ್ನೆಗಳ ಮೂಲಕ ತಾನು ಪ್ರತಿನಿಧಿಸುವ ಬೈಂದೂರು ಕ್ಷೇತ್ರದ ಬಗ್ಗೆ ಕಾಳಜಿ ತೋರಿಸಿದ್ದಾರೆ.
ಬರಿಗಾಲ ಸಂತ ಎನ್ನುವ ಹ್ಯಾಷ್ ಟ್ಯಾಗ್ ಜೊತೆಗೆ ಚುನಾವಣೆ ಎದುರಿಸಿ ಬೈಂದೂರು ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಬಿಜೆಪಿ ಖಾತೆಗೆ ಅಂಕ ಉಳಿಸಿಕೊಟ್ಟ ಗುರುರಾಜ್ ಗಂಟಿಹೊಳೆ, ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರರ ಪರವಾಗಿ ತಾನೇ ಅಭ್ಯರ್ಥಿ ಎಂಬಂತೆ ಹೋರಾಡಿ ಗೆಲುವು ದಾಖಲಿಸಿ ಕೊಟ್ಟಿದ್ದರು. ಕೊಲ್ಲೂರು ಕಾರಿಡಾರ್, ಬೈಂದೂರು ವಿಮಾನ ನಿಲ್ದಾಣ, ಬೈಂದೂರು ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಕೆಎಸ್.ಆರ್.ಟಿ.ಸಿ ನಿಲ್ದಾಣ ಪೂರ್ಣಗೊಳಿಸುವುದು, ಪ್ರವಾಸೋದ್ಯಮದ ಅಭಿವೃದ್ಧಿಯ ಕನಸು ಕಂಡಿರುವ ಗುರುರಾಜ್ ಗಂಟಿಹೊಳೆ, ಈ ಬಾರಿಯ ಅಧಿವೇಶನದಲ್ಲಿಯೂ ಅತೀ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳುವ ಮೂಲಕ ಯುವ ಜನಪ್ರತಿನಿಧಿಗಳಿಗೆ ಮಾತ್ರವಲ್ಲ, ಹಿರಿಯ ನಾಯಕರಿಗೂ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗದು.