ಕೋಟ: ಗಿಡಮರದ ಪೋಷಣೆ ಪ್ರತಿಯೊಬ್ಬರಿಂದಾಗಲಿ – ಕೆ.ತಾರಾನಾಥ್ ಹೊಳ್ಳ
ಕುಂದಾಪುರ: ಪರಿಸರದ ಬಗ್ಗೆ ಪ್ರತಿಯೊಬ್ಬರಿಗೂ ತುಡಿತವಿದ್ದರೆ ಸಾಲದು. ನಿರಂತರ ಪೋಷಣೆ ಮಾಡುವ ಕಾರ್ಯ ಆಗಬೇಕಿದೆ ಎಂದು ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಹೇಳಿದರು. ಅವರು ಕಾರ್ಕಡ ಶಾಲಾ ವಠಾರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ, ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸುವರ್ಣ ಎಂಟರ್ ಪ್ರೈಸಸ್ ಬ್ರಹ್ಮಾವರ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ, ಸೀನಿಯರ್ ಜೆಸಿಐ ಕೋಟ ಇವರ ಸಹಯೋಗ ಮತ್ತು ಗೆಳೆಯರ ಬಳಗ ಕಾರ್ಕಡ ಸಂಯೋಜನೆಯೊಂದಿಗೆ ಹಸಿರು ಜೀವ 218ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನಸಾಮಾನ್ಯರು ಸಾಂಕೇತಿಕ ಗಿಡ ನಡುವ ಕಾರ್ಯಕ್ಕೆ ಸಿಮೀತವಾಗದೆ ಅದನ್ನು ಪೋಷಿಸಿ ಅದರ ಲಾಭವನ್ನು ನಾಲ್ಕಾರು ಮಂದಿಗೆ ಸಿಗುವಂತೆ ಮಾಡಬೇಕು. ಮಿತಿ ಮೀರಿದ ತಾಪಮಾನವನ್ನು ಸಮತೋಲನಗೊಳಿಸಲು ಹಸಿರು ಅಭಿಯಾನ ಸಹಕಾರಿ ಎಂದರು. ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ಸಂಜೀವ ದೇವಾಡಿಗ, ಗಿರೀಜಾ ಪೂಜಾರಿ, ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್ ಕಾಮತ್, ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ, ಕಾರ್ಯದರ್ಶಿ ಶೀನ ಕಾರ್ಕಡ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ನೂರಕ್ಕೂ ಅಧಿಕ ಪುಟಾಣಿಗಳು ಭಾಗವಹಿಸಿ ಗಿಡಗಳನ್ನು ಕೊಂಡ್ಯೊಯ್ದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
