ಪರಿಸರ ಅರಿವಿಗೆ ವನಮಹೋತ್ಸವ ಮುಖ್ಯ – ಬಿ.ಅರುಣ್ ಕುಮಾರ್ ಹೆಗ್ಡೆ
ಯಡಾಡಿ ಮತ್ಯಾಡಿ: ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮದಲ್ಲಿ ವನಮಹೋತ್ಸವ
ಕುಂದಾಪುರ: ಅಭಿವೃದ್ಧಿ ಹೆಸರಿನಲ್ಲಿ ದೇಶದ ಬಹುಪಾಲು ಅರಣ್ಯವನ್ನು ಕಡಿಯಲಾಗಿದ್ದು ಹವಾಮಾನದಲ್ಲಿ ಸಾಕಷ್ಟು ವೈಪರೀತ್ಯ ಕಾಣುತ್ತಿದ್ದೇವೆ. ನಮ್ಮ ಬದುಕು ಸಂತಸದಾಯಕವಾಗಬೇಕಾದರೆ ಹಸಿರು ಗಿಡಮರಗಳು ಅತ್ಯಗತ್ಯ. ಪ್ರತೀ ವರ್ಷ ವನಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಹೆಚ್ಚುಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸರ್ಕಾರದ ಆಲೋಚನೆಯಲ್ಲಿ ಲಯನ್ ಕ್ಲಬ್ ಮೊದಲಾದ ಸಂಸ್ಥೆಗಳು ಕೈಜೋಡಿಸುತ್ತಿವೆ. ಪ್ರತೀ ವರ್ಷ ಶಾಲೆಗಳಲ್ಲಿ ನಡೆಸುತ್ತಿರುವ ವನಮಹೋತ್ಸವ ಕಾರ್ಯಕ್ರಮಗಳು ಶ್ಲಾಘನೀಯ. ಹಸಿರು ಪರಿಸರ ಕಾಪಾಡುವುದು ನಮ್ಮೆಲ್ಲರ ಹೊಣೆ” ಎಂದು ಲಯನ್ಸ್ ಕ್ಲಬ್ ಉಡುಪಿ ಜಿಲ್ಲಾ ರಾಯಬಾರಿ ಆಗಿರುವ ಲಯನ್ಸ್ ಕ್ಲಬ್ ಉಡುಪಿ ಜಿಲ್ಲೆಯ ಗವರ್ನರ್ ಆಗಿರುವ ಲಯನ್ ಬಿ.ಅರುಣ್ ಕುಮಾರ್ ಹೆಗ್ಡೆ ಹೇಳಿದರು.
ಲಯನ್ಸ್ ಕ್ಲಬ್ ಮೊಳಹಳ್ಳಿ ಶಿವಶಾಂತಿ ಮತ್ತು ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕುಂದಾಪುರ ಲಿಟ್ಲ್ ಸ್ಟಾರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಯಡಾಡಿ ಮತ್ಯಾಡಿ ಜೊತೆಯಾಗಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಸಭೆಯಲ್ಲಿ ಅಭ್ಯಾಗತರಾಗಿದ್ದ ಅರಣ್ಯ ಅಧಿಕಾರಿಗಳಾದ ಮಂಜುನಾಥ ಗಣಪತಿ ನಾಯಕ್ ಮಾತನಾಡಿ, 1950ರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಕೆ.ಎನ್. ಮುನ್ಷಿ ಅವರಿಂದ ಆರಂಭವಾದ ವನಮಹೋತ್ಸವ ಕಾರ್ಯಕ್ರಮ ಇಂದು ಹಸಿರು ಪರಿಸರ ನಿರ್ಮಾಣದಲ್ಲಿ ತುಂಬಾ ಸಹಕಾರಿಯಾಗಿದೆ ಎಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ಮಾತನಾಡಿ, ವನಮಹೋತ್ಸವದಂತಹ ಹಲವಾರು ಅರಿವು ಮತ್ತು ಜಾಗ್ರತಿ ಮೂಡಿಸುವ ಕಾರ್ಯಕ್ರಮವನ್ನು ನಮ್ಮ ಸಂಸ್ಥೆ ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿಯೂ ಸಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಮೊಳಹಳ್ಳಿ ಶಿವಶಾಂತಿ ಯ ಅಧ್ಯಕ್ಷ ಲ. ಯು.ಎಸ್.ಮೋಹನ್ ದಾಸ್ ಶೆಟ್ಟಿ ಮಾತನಾಡಿ, ಇಂದು ವಿಶ್ವದಾದ್ಯಂತ ಲಯನ್ಸ್ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿ ಮಾದರಿ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯ ಸುಬ್ಬಣ್ಣ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಖಜಾಂಚಿ ದಯಾನಂದ, ಸಂಸ್ಥೆಯ ಆಡಳಿತ ಮಂಡಳಿ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಪ್ರತಾಪ್ ಚಂದ್ರ ಶೆಟ್ಟಿ, ಭರತ್ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕ ಪ್ರದೀಪ್ ಉಪಸ್ಥಿತರಿದ್ದರು. ಶಿಕ್ಷಕ ಸಂತೋಷ್ ಕುಮಾರ್ ನಿರೂಪಿಸಿ ವಂದಿಸಿದರು.
