ನಿಲ್ಲದ ಮಳೆ, ಜಲದಿಗ್ಬಂಧನದಿಂದ ಕಂಗೆಟ್ಟ ಜನ – ಸತತ ರಜೆ ಘೊಷಿಸಿದ ಜಿಲ್ಲಾಡಳಿತ
ಗಂಗೊಳ್ಳಿ : ಕಳೆದ ಒಂದು ವಾರದಿಂದಲೂ ನಿರಂತರ ಮಳೆಯಿಂದಾಗಿ ನಾವುಂದ ಗ್ರಾಮದ ಸಾಲ್ಬುಡ, ಅರೆಹೊಳೆ, ಕೆಳಾಬದಿ, ಪಡುಕೋಣೆ ಚಿಕ್ಕಳ್ಳಿ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದಲೇ ಭಾರೀ ನೆರೆ ಬಂದಿದೆ. ಇದು ಈ ಭಾಗದಲ್ಲಿ ಈ ಬಾರಿಯ ಮೂರನೆ ನೆರೆಯಾಗಿದೆ. ಕಳೆದ ಭಾನುವಾರವಷ್ಟೇ ಇಲ್ಲಿ ನೆರೆ ಆವರಿಸಿತ್ತು. ಗದ್ದೆಗಳಲ್ಲಿ ಹಾಗೂ ನೆರೆಪೀಡಿತ ಪ್ರದೇಶದಲ್ಲಿ ಅದರ ನೀರೇ ಇನ್ನೂ ಪೂರ್ಣವಾಗಿ ಇಳಿದಿರಲಿಲ್ಲ. ಅಷ್ಟರೊಳಗೆ ಮತ್ತೊಂದು ನೆರೆ ಬಂದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸಾಲ್ಬುಡ, ಅರೆಹೊಳೆ ಸಂಪರ್ಕ ರಸ್ತೆಯೇ ಸಂಪೂರ್ಣ ಮುಳುಗಡೆಯಾಗಿದ್ದು, ಭತ್ತದ ಬೆಳೆ ನೀರಲ್ಲಿ ಕೊಳೆತು, ಈ ಬಾರಿಯ ಬೆಳೆ ಸಂಪೂರ್ಣ ನಾಶವಾಗುವ ಆತಂಕ ರೈತರದು. ಸೌಪರ್ಣಿಕಾ ನದಿ ತೀರದ ನಾಡ ಗ್ರಾಮದ ಚಿಕ್ಕಳ್ಳಿ, ಕುದ್ರು, ಬಡಾಕೆರೆ, ಪಡುಕೋಣೆ, ಮರವಂತೆ, ಕುರು ಕುದ್ರು ಭಾಗದಲ್ಲೂ ನೆರೆ ಬಂದಿದ್ದು, ಗದ್ದೆಗಳು ಜಲಾವೃತಗೊಂಡಿವೆ. ತೋಟಗಳಲ್ಲಿ ಭಾರೀ ಪ್ರಮಾಣದ ನೆರೆ ನೀರು ನಿಂತಿದೆ.

ಗಾಳಿ ಮಳೆಯಿಂದ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ಹಾನಿಯಾಗಿದೆ. ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ನಿವಾಸಿ ರೇಖಾ ಎಂಬುವರ ವಾಸ್ತವ್ಯದ ಮನೆ ಗಾಳಿ ಮಳೆಗೆ ಕುಸಿದು ಬಿದ್ದಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಚರಂಡಿ ಅವ್ಯವಸ್ಥೆಯಿಂದ ಮಳೆ ನೀರು ರಸ್ತೆ ಮೇಲೆ ನಿಂತು ಕೆರೆಯಂತಾಗಿದೆ. ವಿದ್ಯಾರ್ಥಿಗಳು, ಪಾದಚಾರಿಗಳು ರಸ್ತೆ ಮೇಲೆ ನಡೆದಾಡಲು ಸಂಕಷ್ಟ ಪಡುವಂತಾಗಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತಿದ್ದು, ಮನೆಗಳಿಗೆ ನುಗ್ಗಿದೆ.

ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಶಾಲೆಗಳಲ್ಲಿ ಪರೀಕ್ಷೆಗಳೂ ನಡೆಯುತ್ತಿರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಆದರೆ ಮಳೆರಾಯನ ಆರ್ಭಟ, ನೆರೆ ಭೀತಿ, ಮುಳುಗಿದ ಗದ್ದೆಗಳು, ಕುಸಿಯುತ್ತಿರುವ ಗುಡ್ಡಗಳ ಭಯ ವ್ಯವಸ್ಥೆಯನ್ನೇ ಕಂಗೆಡಿಸುವಂತೆ ಮಾಡಿದೆ.
