ನಾವುಂದ: ಬಡಾಕೆರೆ ಸಂಪರ್ಕ ರಸ್ತೆ ಕಡಿತ ಭಯ, ಹಲವೆಡೆ ನೆರೆ – ನಾವುಂದ ಸಾಲ್ಬುಡ ಬಡಾಕೆರೆ ಭಾಗದ ಜನರಿಗೆ ಜಲ ದಿಗ್ಭಂಧನ.
ಕುಂದಾಪುರ: ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೌಪರ್ಣಿಕ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಬೈಂದೂರಿನ ಹಲವೆಡೆ ನೆರೆ ಬಂದಿದೆ. ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡ, ಬಡಾಕೆರೆ ಭಾಗದಲ್ಲಿ ಏರ್ಪಟ್ಟ ಕೃತಕ ಜಲ ದಿಗ್ಭಂಧನ ಜನ ಕಂಗಾಲಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಭಾಗಗಳಲ್ಲಿ ತೀವ್ರಗೊಂಡಿದ್ದ ಮಳೆಯಿಂದಾಗಿ ನೆರೆ ಸೃಷ್ಟಿಯಾಗಿತ್ತು. ಇದೀಗ ರಡನೇ ಬಾರಿ ಮನೆಗಳಿಗೆ ನೀರು ನುಗ್ಗಿದೆ. ಜಾನುವಾರುಗಳು ಅತಂತ್ರವಾಗಿವೆ. ಗ್ರಾಮಸ್ಥರು ಕಂಗಾಲಾಗಿದ್ದಾರೆ. ಭಾನುವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಈ ಪ್ರದೇಶಗಳು ಅಕ್ಷರಶಃ ನರಕ ಸದೃಶವಾಗಿವೆ.


ನಾವುಂದ, ಬಡಾಕೆರೆ,ಮರವಂತೆ ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ತಗ್ಗು ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಹಿಡಿ ಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು. ಮಳೆಗಾಲದಲ್ಲಿ ನೂರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗುತ್ತವೆ. ವಾರಗಟ್ಟಲೆ ಮನೆಬಿಟ್ಟು ಹೊರಹೋಗಬೇಕಾದ ಸ್ಥಿತಿಯಿದೆ. ಚುನಾವಣೆ ಸಂದರ್ಭ ಬರುವ ರಾಜಕಾರಣಿಗಳು ಬಳಿಕ ಮಾಯವಾಗುತ್ತಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಮಳೆಗಾಲದ ನೆರೆ ಸಮಯ ಬಂದು ವೀಕ್ಷಿಸಿ ಹೋಗುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮತ್ತೆ ತಿರುಗಿ ನೋಡುತ್ತಿಲ್ಲ ಎಂದು ಇಲ್ಲಿನ ಸಂತ್ರಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಮಗೆ ಮುಖ್ಯವಾಗಿ ದನದ ಕೊಟ್ಟಿಗೆ ನಿರ್ಮಿಸಬೇಕು ಹಾಗೂ ಹಲವಾರು ವರ್ಷದ ಬೇಡಿಕೆಯಾದ ನಾವುಂದ ಸಾಲ್ಬುಡ ಪ್ರದೇಶವನ್ನು ಎತ್ತರಿಸಿ ಕೊಡಬೇಕು. ಆ ಮೂಲಕ ಮುಖ್ಯ ಎತ್ತರ ಮಾಡಿ ಮಾಡಿ ಕೊಡಬೇಕು ಇದರಿಂದ ನೆರೆಹಾವಳಿಯಿಂದ ಹೇಗಾದರೂ ಮಾಡಿ ಪಾರಾಗಲು ಸಾಧ್ಯವಿದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾವುಂದದಿಂದ ಬಡಾಕೆರೆ ಸಂಪರ್ಕಿಸುವ ರಸ್ತೆ ಕೊಚ್ಚಿ ಹೋಗುವ ಅಪಾಯದಲ್ಲಿದೆ.



ಅನಾರೋಗ್ಯ ಪೀಡಿತರು ಸಹಿತ ಆಹಾರ ಸಾಮಾಗ್ರಿ, ದಿನಸಿ ತರಬೇಕಾದರೆ ದೋಣಿ ಏರಿ ಪೇಟೆಗೆ ಬರಬೇಕು. ಒಂದು ದಡದಿಂದ ಮತ್ತೊಂದು ದಡಕ್ಕೆ ಸುಮಾರು ಮೂರು ಕಿಲೋಮೀಟರ್ ದೂರ ದೋಣಿ ಚಲಾಯಿಸುವುದು ನಿಜಕ್ಕೂ ಸಾಹಸವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ದೋಣಿ ಚಲಾಯಿಸಲು ತಿಳಿದವರು ದೋಣಿ ಮೂಲಕ ಸಾರ್ವಜನಿಕರಿಗೆ ನೆರವಾಗುತ್ತಿರುವುದು ಮತ್ತು ಬೈಂದೂರು ಅಗ್ನಿಶಾಮಕದ ಸಿಬ್ಬಂದಿಗಳು ಬೆಳಿಗ್ಗೆಯಿಂದ ಕೂಡ ನರೇ ಪ್ರದೇಶಕ್ಕೆ ಕಾರ್ಯಚರಣೆ ನಡೆಸುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ ಇಲ್ಲಿನ ಸಂತ್ರಸ್ಥರು.
