ಗ್ರಾಮೀಣ ರಸ್ತೆಗಳಲ್ಲಿ ಬಸ್ ಓಡಿಸಿ, ಶಾಲಾಮಕ್ಕಳಿಗೆ ಅನುಕೂಲ ಕಲ್ಪಿಸಿ – ಖಾಸಗೀ ಬಸ್ ಮಾಲೀಕರು ಹಾಗೂ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಸಭೆಯಲ್ಲಿ ಶಾಸಕ ಗಂಟಿಹೊಳೆ
ಬೈಂದೂರು: ಬೈಂದೂರು ತಾಲೂಕಿನ 14 ಗ್ರಾಮೀಣ ರಸ್ತೆಗಳಲ್ಲಿ ಬಸ್ ಓಡಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ನಾಗರೀಕರಿಗೆ ಅವಕಾಶ ಕಲ್ಪಿಸಿ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆದೇಶಿಸಿದ್ದಾರೆ

ಗ್ರಾಮೀಣ ಭಾಗದಲ್ಲಿ ಆಗುತ್ತಿರುವ ಸಾರಿಗೆ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶುಕ್ರವಾರ ಉಪ್ಪುಂದದ ಕಾರ್ಯಕರ್ತ ಕಚೇರಿಯಲ್ಲಿ ಕರೆಯಲಾದ ಖಾಸಗಿ ಬಸ್ ಮಾಲೀಕರು, ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಆರ್ಟಿಓ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಖಾಸಗಿ ಬಸ್ ಮಾಲೀಕರು ಯಾವ ರೂಟ್ಗೆ ಪರ್ಮಿಟ್ ಪಡೆದಿದ್ದಾರೋ ಅದೇ ರೂಟ್ನಲ್ಲಿ ಬಸ್ ಓಡಿಸಬೇಕು. ಒಂದೊಮ್ಮೆ ಖಾಸಗೀ ಬಸ್ ಸಂಚರಿಸದಿದ್ದರೆ ಅಲ್ಲಿಗೆ ಸರ್ಕಾರೀ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದ ಅವರು, ಖಾಸಗಿ ಬಸ್ ಇಲ್ಲದ ರೂಟ್ಗಳಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ತಕ್ಷಣದಿಂದಲೇ ಓಡಿಸಬೇಕು. ಎಂದರು. ಖಾಸಗೀ ಹಾಗೂ ಸರ್ಕಾರೀ ಬಸ್ ಚಾಲಕ ನಿರ್ವಾಹಕರ ನಡುವೆ ಸಮನ್ವಯತೆ ಇರಲಿ ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ತೊಂದರೆಯಾದರೆ ಸಹಿಸಲಾಗದು ಎಂದು ಎಚ್ಚರಿಸಿದ ಶಾಸಕರು, ಸಮಸ್ಯೆಗಳು ಪರಿಹಾರವಾಗದೇ ಇದ್ದಲ್ಲಿ ವಿದ್ಯಾರ್ಥಿಗಳೊಂದಿಗೆ ತಾನೂ ಪ್ರತಿಭಟನೆಯಲ್ಲಿ ಭಾಗವಹಿಸುವ ಎಚ್ಚರಿಕೆ ನೀಡಿದರು. ಶಕ್ತಿ ಯೋಜನೆಯನ್ನು ಖಾಸಗೀ ಬಸ್ಸುಗಳಿಗೂ ವಿಸ್ತರಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ ಶಾಸಕರು, ಸರ್ಕಾರೀ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಪ್ರಯಾಣಿಕರಿಗೂ ಶೌಚಾಲಯ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದರು.
ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ಡಿಸಿ ರಾಜೇಶ್ ಶೆಟ್ಟಿ, ಆರ್ಟಿಒ ಎಲ್ ಪಿ ನಾಯಕ್, ಖಾಸಗಿ ಬಸ್ ಮಾಲೀಕರಾದ ಕುಯಿಲಾಡಿ ಸುರೇಶ್ ನಾಯಕ್, ಸದಾನಂದ ಚಾತ್ರ ಶಿವಾನಂದ ಗಾಣಿಗ, ಸುರೇಶ್ ಶೆಟ್ಟಿ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
