ಬೀಜಾಡಿ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿದ್ದ ತಿಪಟೂರು ಯುವಕನ ಮೃತದೇಹ ಕಾರವಾರದಲ್ಲಿ ಪತ್ತೆ

ಕುಂದಾಪುರ: ತಿಪಟೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಯ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ತಿಪಟೂರಿನ ಯುವಕ ಯೋಗೀಶ್ ಬೀಜಾಡಿ ಸಮುದ್ರ ತೀರದಲ್ಲಿ ನೀರಿಗಿಳಿದ ವೇಳೆ ಕೊಚ್ವಿ ಹೋಗಿದ್ದು, ಆತನ ಮೃತ ದೇಹವನ್ನು ಒಂದು ವಾರದ ಬಳಿಕ ಇಂದು ಕಾರವಾರದ ಮೀನುಗಾರರು ಪತ್ತೆಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಬುಧವಾರ ತಿಪಟೂರಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳಾದ ಸಂದೀಪ್ ಹಾಗೂ ಯೋಗೀಶ್ ಎಂಬುವರು ತಮ್ಮ ಸ್ನೇಹಿತನ ಮನೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಬಳಿಕ ಇಬ್ಬರೂ ಸಂಜೆ ಸಮುದ್ರಕ್ಕಿಳಿದಿದ್ದು ಒಬ್ಬ ನಾಪತ್ತೆಯಾಗಿದ್ದು, ಇನ್ನೊಬ್ಬನನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ತಿಪಟೂರಿನ ನಿವಾಸಿ ಯೋಗೋಶ್ (23) ಸಮುದ್ರದಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ.
ಕುಂದಾಪುರ ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು, ಮುಳುಗುತಜ್ಞರು ಯೋಗೀಶ್ ಗಾಗಿ ಹುಡುಕಾಟ ನಡೆಸಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಯೋಗೇಶ್ ನ ಮೃತದೇಹ ಕಾರವಾರದಲ್ಲಿ ಪತ್ತೆಯಾಗಿದೆ.