ಬ್ರಹ್ಮಾವರ: ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ

ಕುಂದಾಪುರ: ಆಕಸ್ಮಿಕವಾಗಿ ದಾರಿ ತಪ್ಪಿ ಊರಿಗೆ ಬಂದಿದ್ದ ಕರಿಚಿರತೆಯೊಂದು ಬಾವಿಗೆ ಬಿದ್ದಿದ್ದು, ಬಳಿಕ ಅರಣ್ಯ ಇಲಾಖೆಯ ಸಹಾಯದಿಂದ ರಕ್ಷಿಸಲಾಗಿದೆ. ಶನಿವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬ್ರಹ್ಮಾವರ ತಾಲೂಕು ಶಿರೂರು ಹೆಮ್ಮಣಿಕೆ ಕೃಷ್ಣ ನಾಯ್ಕ ಅವರ ತೆರೆದ ಬಾವಿಗೆ ಜೂ.14ರಂದು ಅಪರೂಪದ ಕಪ್ಪು ಚಿರತೆ ಬಿದ್ದಿದೆ. ಶನಿವಾರ ಬಾವಿಯಲ್ಲಿ ಚಿರತೆ ಇರುವುದು ಗೊತ್ತಾಗಿದೆ. ತಕ್ಷಣ ಪಕ್ಕದ ರಬ್ಬರ್ ಪ್ಲಾಂಟೇಶನ್ ಮಾಲಕರಾದ ಶೇಖರ ಶೆಟ್ಟಿಯವರ ಗಮನಕ್ಕೆ ತಂದಾಗ ಅವರು ವಂಡಾರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸ್ಥಳೀಯರು ಕಾರ್ಯಾಚರಣೆ ನಡೆಸಿ ಕಪ್ಪು ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಬಾವಿಯಿಂದ ಮೇಲೆ ಬಂದ ಕಪ್ಪು ಚಿರತೆ ರಬ್ಬರ್ ತೋಟದೊಳಗೆ ಓಡಿ ಮರೆಯಾಗಿದೆ.
