ಪ್ರಬಲ ಕಾರ್ಯಕರ್ತರನ್ನು ಹೊಂದಿರುವ ರಘುಪತಿ ಭಟ್ ಗೆ ಟಿಕೆಟ್ ವಂಚನೆಯಾಗುತ್ತಿರುವುದೇಕೆ?
ವಿಶ್ಲೇಷಣೆ
ರಘುಪತಿ ಭಟ್. ಈ ಹೆಸರು ರಾಜ್ಯದಾದ್ಯಂತ ಪರಿಚಿತವಾಗಿರುವ ಹೆಸರು. ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ರಘುಪತಿ ಭಟ್, ಅನುದಾನದಿಂದ ಹಿಡಿದು ಅಭಿವೃದ್ಧಿಯ ವರೆಗೂ ತನ್ನದೇ ರೀತಿಯಲ್ಲಿ ಸಾಧನೆ ಮಾಡಿದ್ದರೂ ಕಳೆದ ಎರಡು ವರ್ಷಗಳಿಂದ ತನ್ನದೇ ಆದ ಬಿಜೆಪಿಯಲ್ಲಿ ಟಿಕೆಟ್ ಪಡೆಯುವುದಕ್ಕೂ ವಿಫಲರಾಗಿರುವುದಕ್ಕೆ ಇಡೀ ಕರಾವಳಿ ಅಷ್ಟೇ ಅಲ್ಲ ರಾಜ್ಯವೇ ಆಶ್ಚರ್ಯಚಕಿತವಾಗಿದೆ.

ರಘುಪತಿ ಭಟ್ ಡ್ರೆಸ್ ಕೋಡ್ ಶಿಸ್ತು ಪಕ್ಷಕ್ಕೆ ಯಾಕೆ ಇಷ್ಟವಾಗಿಲ್ಲ ಎನ್ನುವ ಡಾಲರ್ ಪ್ರಶ್ನೆಗೆ ಸ್ವತಃ ರಘುಪತಿ ಭಟ್ ಬಳಿಯೇ ಉತ್ತರವಿರಲಿಕ್ಕಿಲ್ಲ. ಉತ್ತಮ ಸಂಘಟನಾ ಚಾತುರ್ಯ ಹೊಂದಿರುವ ರಘುಪತಿ ಭಟ್ ತನ್ನ ಜಾತಿ ಪ್ರಾಬಲ್ಯವಿರದ ಉಡುಪಿ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿ ತನ್ನದೇ ಆದ ಕಾರ್ಯಕರ್ತರ ಪಡೆ ಹೊಂದಿರುವ ನಾಯಕ. ಸಣ್ಣ ಹುಡುಗರು ಹೋದರೂ ಗೌರವಿಸಿ ಮಾತನಾಡುವ ರಘುಪತಿ ಭಟ್, ಕಾರ್ಯಕರ್ತರಿಗೂ ಅಷ್ಟೇ ಗೌರವ ನೀಡುವ ವ್ಯಕ್ತಿತ್ವ ಹೊಂದಿದವರು. ಹಾಗೇ ನೋಡಿದರೆ ಹಿಂದೂತ್ವದ ತರಬೇತಿ ಕೇಂದ್ರದಂತಿರುವ ಉಡುಪಿ ಜಿಲ್ಲೆಯ ಮೂರು ದಶಕಗಳಿಗೆ ಹೋಲಿಸಿದರೆ ಎಗ್ರೆಸಿವ್ ಹಿಂದೂಯಿಸಂ ಎಥಿಕ್ಸನ್ನು ಅಷ್ಟೊಂದು ಗಾಢವಾಗಿ ಅವಲಂಭಿಸಿದವರಲ್ಲ. ಹಾಗಾಗಿಯೇ ಅವರ ಮನೆಗೆ ಈಗಲೂ ಸಮಸ್ಯೆಗ ಹೇಳಿಕೊಂಡು ಅಲ್ಪಸಂಖ್ಯಾತರೂ ಹೋಗುತ್ತಿರುತ್ತಾರೆ. ಹಾಗಿದ್ದರೆ ಇಷ್ಟೊಂದು ಅಭಿಮಾನ, ಬೆಂಬಲ, ಕಾರ್ಯಕರ್ತರ ಶ್ರೀರಕ್ಷೆ ಇರುವ ರಘುಪತಿ ಭಟ್ ಯಾಕೆ ಬಿಜೆಪಿಯಲ್ಲಿ ಟಿಕೆಟ್ ವಂಚಿತರಾಗುತ್ತಿದ್ದಾರೆ? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗೋದು ಸ್ವಲ್ಪ ಕಷ್ಟವೇ.
ಕಳೆದ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ರಘುಪತಿ ಭಟ್ ಗೆ ಬಿಜೆಪಿ ಟಿಕೆಟ್ ನೀಡುತ್ತೆ ಎನ್ನುವ ಲೆಕ್ಕಾಚಾರವಿತ್ತು. ಅದನ್ನು ಸ್ವತಃ ರಘುಪತಿ ಭಟ್ ಅವರೂ ನಂಬಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶಗಳು, ಪಕ್ಷದೊಳಗಿನ ನಾಯಕರ ಭಿನ್ನಮತ, ಹೊಟ್ಟೆಕಿಚ್ಚು ರಘುಪತಿ ಭಟ್ ಗೆ ಟಿಕೆಟ್ ವಂಚನೆಗೆ ಕಾರಣವಾಯ್ತು ಎನ್ನಲಾಗುತ್ತಿದೆ. ಆದರೆ ಇದೇ ಸಂದರ್ಭ ರಘುಪತಿ ಭಟ್ ಗೆ ನೀಡಬೇಕಿದ್ದ ಟಿಕೆಟ್ಟನ್ನು ಯಶ್ಪಾಲ್ ಸುವರ್ಣರಿಗೆ ನೀಡಿದಾಗಲಂತೂ ರಘುಪತಿ ಭಟ್ ಕುಗ್ಗಿಹೋದರು. ಆದರೆ ಭಟ್ಟರ ಹಿಂದಿರುವ ಕಾರ್ಯಕರ್ತರ ಪಡೆಯ ಒತ್ತಡಕ್ಕೆ ಮಣಿದ ಬಿಜೆಪಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದ್ದಲ್ಲದೇ ರಘುಪತಿ ಭಟ್ ಗೆ ಎಂಎಲ್ಸಿ ಟಿಕೆಟ್ ನೀಡುವ ವಾಗ್ದಾನ ನೀಡಿತ್ತು. ಎಂಎಲ್ಸಿ ಟಿಕೆಟ್ ಆಶ್ವಾಸನೆ ಬೆನ್ನಿಗೇ ರಘುಪತಿ ಭಟ್ ಬೇಸರ ದೂರವಾಗಿತ್ತು. ಆದರೆ ಅದಕ್ಕಾಗಿ ಕಾಯುತ್ತಿದ್ದ ಭಟ್ ಗೆ ಈಗ ಮ್ತತೆ ಟಿಕೆಟ್ ವಂಚನೆಯಾಗಿರುವುದು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಚುರುಕಿನ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.
ರಘುಪತಿ ಭಟ್ ಗೆ ನೀಡಿದ ಆಶ್ವಾಸನೆ ಬಳಿಕ ದೇಶದಲ್ಲಿ ನಡೆದ ರಾಜಕೀಯ ವಿದ್ಯಾಮಾನಗಳ ಕಾರಣ ಬಿಜೆಪಿ ಯ ಎನ್.ಡಿ.ಎ ಮೈತ್ರಿ ಕೂಟಕ್ಕೆ ಜೆಡಿಎಸ್ ಸೇರ್ಪಡೆಯಾಯಿತು. ಬಳಿಕ ವಿದ್ಯಾಮಾನ ನೀವೇ ನೋಡುತ್ತಿದ್ದೀರಿ. ಮೊನ್ನೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆದಿದೆ. ಇದೀಗ ಪದವೀಧರ ಮತ್ತು ನೈರುತ್ಯ ಶಿಕ್ಷಕಕರ ಕ್ಷೇತ್ರಕ್ಕೆ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯುತ್ತಿರುವ ಕಾರಣಕ್ಕೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್ ನ ಎಸ್.ಎಲ್. ಬೋಜೇಗೌಡರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.

ಭೋಜೇಗೌಡರು ಜಾತ್ಯಾತೀತ ಜನತಾದಳ ಪ್ರಮುಖ ನಾಯಕರಲ್ಲಿ ಒಬ್ಬರು. ಅದಕ್ಕಿಂತಲೂ ಮಿಗಿಲಾಗಿ ದೊಡ್ಡಗೌಡರ ಕುಟುಂಬದ ಒಬ್ಬ ಸದಸ್ಯನಂತಿರುವವರು. ಕುಮಾರ ಸ್ವಾಮಿ ಎಲ್ಲಿರುತ್ತಾರೋ ಅಲ್ಲಿ ಈ ಬೋಜೇಗೌಡರಿರುತ್ತಾರೆ. ಹೈಕೋರ್ಟ್ ಲಾಯರ್ ಆಗಿರುವ ಬೋಜೇಗೌಡರು ಹಾಲೀ ವಿಧಾನಪರಿಷತ್ ಸದಸ್ಯರೂ ಹೌದು. ಇನ್ನೂ ವಿಶೇಷವೆಂದರೆ ಭೊಜೇಗೌಡರು ಕ್ಲೀನ್ ಹ್ಯಾಂಡ್ ಎಂಡ್ ಫವರ್ಫುಲ್ ಪರ್ಸನ್. ಶಿಕ್ಷಕರಿಗೆ ಎಲ್ಲೇ ಏನೇ ಸಮಸ್ಯೆಗಳು ಬಂದರೂ ಭೋಜೇಗೌಡರು ಅವರ ಸಹಾಯಕ್ಕೆ ಎಲ್ಲರಿಗಿಂತ ಮುಂದೆ ಬಂದು ನಿಲ್ಲುತ್ತಾರೆ. ಇದೇ ಕಾರಣಕ್ಕೆ ಶಿಕ್ಷಕರೂ ಭೋಜೇಗೌಡರಿಗೆ ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದಾರೆ. ಒಂದು ವೇಳೆ ಬಿಜೆಪಿ ಈ ಭೋಜೇಗೌಡರಿಗೆ ಟಿಕೆಟ್ ನೀಡದೇ ಇದ್ದಿದ್ದರೆ, ಭೋಜೇಗೌಡರು ಪಕ್ಷೇತರರಾಗಿ ಸ್ಪರ್ಧಿಸಿದರೆ ಆಗ ಅನಾಯಾಸವಾಗಿ ಗೆಲುವು ಸಾಧಿಸುವ ತಾಕತ್ತೂ ಈ ಭೋಜೇಗೌಡರಿಗಿದೆ ಎನ್ನುವ ಯೋಚನೆ ಬಿಜೆಪಿಯಲ್ಲಿತ್ತು. ಒಂದು ವೇಳೆ ಭೋಜೇಗೌಡರು ಸೋತರೂ ಆಗ ಕಾಂಗ್ರೆಸ್ ಅನಾಯಾಸವಾಗಿ ಗೆಲುವು ಸಾಧಿಸಬಹುದು ಎನ್ನುವ ಭಯವೂ ಇದ್ದಿದ್ದರಿಂದಲೇ ಎನ್.ಡಿ.ಎ. ಮೈತ್ರಿ ಕೂಟದ ಸದಸ್ಯ ಪಕ್ಷದ ಭೋಜೇಗೌಡರಿಗೆ ಅನಿವಾರ್ಯವಾಗಿ ಟಿಕೆಟ್ ನೀಡಲಾಗಿದೆ ಎನ್ನಲಾಗುತ್ತಿದೆ.
ಆದರೆ ಬಿಜೆಪಿಯ ಕೆಲವು ನಾಯಕರು ಹಾಗೂ ಕಾಂಗ್ರೆಸ್ ನ ಕೆಲವರು ರಘುಪತಿ ಭಟ್ ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಬೇರೆಯೇ ಕಾರಣ ನೀಡುತ್ತಿದ್ದಾರೆ. ಅದೇನೆಂದರೆ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಸ್ಟೋರಿ ರಘುಪತಿ ಭಟ್ ವಿಚಾರದಲ್ಲಿ ಪ್ರತಿಫಲಿಸಿದೆ ಎನ್ನುವುದು! ಅದಕ್ಕಾಗಿಯೇ ಎಂಎಲ್.ಎ. ಸ್ಥಾನಕ್ಕೂ ಟಿಕೆಟ್ ನೀಡಿಲ್ಲ ಎನ್ನುವ ಮಾತುಗಳು ಇಲ್ಲಿ ಕೇಳಿ ಬರುತ್ತಿದೆ. ಒಂದು ವೇಳೆ ರಘುಪತಿ ಭಟ್ ಗೆ ಟಿಕೆಟ್ ನೀಡಿದರೆ ಬಿಜೆಪಿಯ ಭಿನ್ನಮತೀಯರು ಕಾಂಗ್ರೆಸ್ ಬೆಂಬಲದೊಂದಿಗೆ ಹಳೆಯ ಸಿಡಿಗಳನ್ನು ಬಿಡುಗಡೆಗೊಳಿಸಿದರೆ ಪಕ್ಷಕ್ಕೆ ಮುಖಭಂಗವಾಗಬಹುದು ಎನ್ನವುದು ಈ ನಾಯಕರ ಅಭಿಪ್ರಾಯ.
ಅದೇನೇ ಇರಲಿ, ಶಾಸಕನಾಗಿ ತನ್ನ ಜವಾಬ್ಧಾರಿಯನ್ನು ಪ್ರಾಮಾಣಿಕವಾಗಿ ನಡೆಸಿದ ಶಾಸಕರ ಸಾಲಿನಲ್ಲಿ ರಘುಪತಿ ಭಟ್ ನಿಲ್ಲುತ್ತಾರೆ. ಬಾಗಿದರೆ ಸೌಮ್ಯವಾಗಿ ಸೆಟೆದರೆ ಎಗ್ರೆಸಿವ್ ಆಗಿದ್ದ ರಘುಪತಿ ಭಟ್ ಗೆ ಬಿಜೆಪಿ ಪದವೀಧರ ಕ್ಷೇತ್ರದ ಟಿಕೆಟ್ ನೀಡಬಹುದಿತ್ತು. ನಾನು ಸತ್ತರೂ ನನ್ನ ಹೆಣದ ಮೇಲೆ ಬಿಜೆಪಿ ಬಾವುಟ ಹೊದೆಸಬೇಕು ಎನ್ನುವ ರಘುಪತಿ ಭಟ್ ಇದೀಗ ಸ್ವಲ್ಪ ವಿಚಲಿತರಾದಂತೆ ಕಾಣುತ್ತಿದೆ. ಅವರ ಮುಂದಿನ ರಾಜಕೀಯ ನಡೆಯಲ್ಲಿ ವ್ಯತ್ಯಾಸವಾದರೆ ಅದು ಕರಾವಳಿ ಬಿಜೆಪಿ ದೊಡ್ಡ ಹೊಡೆತ ಎನ್ನುವುದನ್ನು ಬಿಜೆಪಿ ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.
ಭಿನ್ನಾಭಿಪ್ರಾಯಗಳು ಏನೇ ಇರಲಿ, ಉಡುಪಿಯನ್ನು ಹೊಸ ಜಿಲ್ಲೆಯನ್ನಾಗಿ ನಮಗೆ ಕೊಟ್ಟ ಮತ್ತು ಅದಕ್ಕಾಗಿ ರಜತಾದ್ರಿಯಲ್ಲಿ ಜಾಗ ಮೀಸಲಿರಿಸಿದ ದೂರದೃಷ್ಟಿ ನಾಯಕ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಜಿಲ್ಲಾ ಕೇಂದ್ರವನ್ನು ರಜತಾದ್ರಿಯಲ್ಲಿ ನಿರ್ಮಿಸಿಕೊಟ್ಟ ವಿ.ಎಸ್.ಆಚಾರ್ಯರ ಶಿಷ್ಯ ರಘುಪತಿ ಭಟ್ಟರ ಸೇವೆಯನ್ನು ಕಳೆದುಕೊಳ್ಳುವುದೆಂದರೆ ಅದು ಕರಾವಳಿಗರ ಬಹುದೊಡ್ಡ ದುರಂತವಾಗಲಿದೆ ಎನ್ನುವುದು ಸ್ಪಟಿಕ ಸತ್ಯ.
