ಎಸ್ಎಸ್ಎಲ್ಸಿ. ಫಲಿತಾಂಶ ಪ್ರಕಟ : ಬಾಗಲಕೋಟೆಯ ಅಂಕಿತಾ ಟಾಪರ್!
ಉಡುಪಿಗೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಯಾದಗಿರಿಗೆ ಕೊನೆಯ ಸ್ಥಾನ
ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ (KSEAB) 2023-24ನೇ ಸಾಲಿನ 10 ನೇ ತರಗತಿ ಪರೀಕ್ಷೆ-1 ಫಲಿತಾಂಶಗಳನ್ನು ಪ್ರಕಟಿಸಿದ್ದು, ಈ ಬಾರಿ 6,31,204 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, (76.91 %) ಫಲಿತಾಂಶ ಸಾಧಿಸಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ 625/625 ಅಂಕಗಳೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಬೆಳ್ತಂಗಡಿ ಎಸ್.ಡಿ. ಎಂ ಪ್ರೌಢಶಾಲಾ ವಿದ್ಯಾರ್ಥಿ ಚಿನ್ಮಯ್ 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಾರ್ಕಳ ತಾಲೂಕು ಕುಕ್ಕುಂದೂರಿನ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಎಸ್.ಎಸ್.ಎಲ್.ಸಿಯಲ್ಲಿ ಈ ಬಾರಿ ಉಡುಪಿ ಜಿಲ್ಲೆ ಶೆ.94 ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆದಕೊಂಡರೆ ದಕ್ಷಿಣ ಕನ್ನಡ ಜಿಲ್ಲೆ 92.12% ಪಡೆದು ದ್ವಿತೀಯ ಸ್ಥಾನಿಯಾಗಿದೆ. ಶೆ.88.67 ಸಾಧನೆಯೊಂದಿಗೆ ಶಿವಮೊಗ್ಗ ಜಿಲ್ಲೆ ತೃತೀಯ ಸ್ಥಾನಿಯಾಗಿದೆ. ಯಾದಗಿರಿ ಜಿಲ್ಲೆ ರಾಜ್ಯದ ಕೊನೆಯ ಸ್ಥಾನಿಯಾಗಿ ಮೂಡಿ ಬಂದಿದೆ.
ರಾಜ್ಯದಲ್ಲಿ ಪರೀಕ್ಷೆಗೆ ಬರೆದ ವಿದ್ಯಾರ್ಥಿಗಳ ಪೈಕಿ ಶೇ 81.11 ವಿದ್ಯಾರ್ಥಿನಿಯರು ಮತ್ತು ಶೇ. 65.90 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.