ಬೈಂದೂರಿನಲ್ಲಿ ಶತದಿನ ಪೂರೈಸಿದ ‘ಸಮೃದ್ಧ ನಡಿಗೆ’ – ಗೆಲ್ಲಿಸುವ ಸವಾಲು ಶಾಸಕ ಗಂಟಿಹೊಳೆ ಮುಡಿಗೆ!
ರಾಜತಾಂತ್ರಿಕ ಕಾರ್ಯತಂತ್ರದ ಕುರಿತು ಒಂದು ವಿಶ್ಲೇಷಣೆ
ಬೈಂದೂರು: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುರುರಾಜ್ ಗಂಟಿಹೊಳೆಗೆ ಈಗ ಲೋಕಸಭಾ ಚುನಾವಣೆಯ ಹೊಣೆ ಸಿಕ್ಕಿದೆ. ತನ್ನ ಗೆಲುವಿಗೆ ಸ್ವತಃ ಇಷ್ಟು ಹೋರಾಟ ಮಾಡಿದ್ದಾರೋ ಗೊತ್ತಿಲ್ಲ ಆದರೆ ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯ ಬೈಂದೂರು ಕ್ಷೇತ್ರದ ಹೊಣೆ ಇಲ್ಲಿನ ಶಾಸಕ ಗುರುರಾಜ್ ಹೆಗಲ ಮೇಲಿದೆ. ಅದೇ ಕಾರಣಕ್ಕೆ ಶತಾಯಗತಾಯ ಗೆಲುವಿನ ಮಾಲೆಗಾಗಿ ಶಾಸಕ ಗಂಟಿಹೊಳೆ ರೂಪಿಸಿದ್ದ ಬೂತ್ ಕಡೆಗೆ ಸಮೃದ್ಧ ನಡಿಗೆ ಕಾರ್ಯಕ್ರಮ ಶತದಿನ ಪೂರೈಸಿದೆ. ವಾಸ್ತವವಾಗಿ ಇದು ಶಾಸಕರ ಸವಾಲಿನ ಕಾರ್ಯಕ್ರಮವಾಗಿದ್ದು ಜನ ಬೆಂಬಲ ಹೇಗೆ ಸಿಗುತ್ತದೆ ಎನ್ನುವ ಪ್ರಶ್ನೆ ಆರಂಭದಲ್ಲಿ ಕ್ಷೇತ್ರದೆಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ಇದೆಲ್ಲದರ ನಡುವೆ ಬೂತ್ ಭೇಟಿ ಒಂದರ್ಥದಲ್ಲಿ ಯಶಸ್ಸು ಕಂಡಿರುವುದು ಸುಳ್ಳಲ್ಲ.

ಕಾರ್ಯಕ್ರಮಕ್ಕೆ ಬಂದವರೆಲ್ಲಾ ಆ ಪಕ್ಷದ ಮತದಾರರು ಎನ್ನುವುದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಅದೇ ರೀತಿ ಬಾರದೇ ಇರುವವರ ಮತಗಳೂ ವ್ಯರ್ಥವಾಗುತ್ತವೆ ಎನ್ನುವುದೂ ಸತ್ಯವಲ್ಲ. ಇದೆಲ್ಲದರ ನಡುವೆ ಮತದಾರರು ಸಾಮಾನ್ಯವಾಗಿ ಗೆಲ್ಲುವ ಕುದುರೆಯ ಬೆನ್ನೇರುವುದರಿಂದ ಗೆಲುವು ನಮ್ಮದೇ ಎನ್ನುವ ಸಂದೇಶ ಮತದಾರನ ಮನಸ್ಸಿನಲ್ಲಿ ಅಚ್ಚೊತ್ತಿಸುವ ಕೆಲಸಗಳೂ ಆಯಾ ಪಕ್ಷಗಳ ಜವಾಬ್ಧಾರಿಯಾಗುತ್ತವೆ. ಇದರ ಹಿನ್ನೆಲೆಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಅಭಿಯಾನ ವಾರದೊಳಗೆ ಶತದಿನ ಪೂರೈಸಿರುವುದು ಸಣ್ಣ ಸಾಧನೆಯಲ್ಲ.

ಬರಿಗಾಲಿನಲ್ಲಿ ನಡೆಯುವುದು ವ್ಯಕ್ತಿಯ ವೈಯುಕ್ತಿಕ ಆಯ್ಕೆಯೇ ಆದರೂ, ಸುಡುಬಿಸಿಲಿನಲ್ಲಿ ನಡೆಯುವುದು ಸಾಮಾನ್ಯದ ಕೆಲಸವಲ್ಲ. ಜೊತೆಗೆ ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ಚರ್ಚಿಸಿ ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಶಾಶ್ವತವಾಗಿಯಲ್ಲದೇ ಇದ್ದರೂ ತಾತ್ಕಾಲಿಕವಾಗಿಯಾದರೂ ಚುನಾವಣೆ ಮುಗಿಯುವವರೆಗೆ ತಾಳ್ಮೆಯಿಂದ ಪರಿಹರಿಸಬೇಕಾದ ಜವಾಬ್ಧಾರಿಯೂ ಗುರುರಾಜ್ ಗಂಟಿಹೊಳೆ ಮೇಲಿದೆ.

ಸಾಧಕ ಬಾಧಕಗಳು ಏನೇ ಇರಲಿ. ಬಿ.ವೈ.ರಾಘವೇಂದ್ರಗೆ ಬೈಂದೂರಿನಲ್ಲಿ ಒಂದು ಲಕ್ಷ ಲೀಡ್ ಕೊಡುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸುವುದು, ಆ ಮೂಲಕ ಅವರನ್ನು ಬೈಂದೂರಿಗೆ ಕರೆತರುವ ಸಂಕಲ್ಪ, ಕೊಲ್ಲೂರು ಕಾರಿಡಾರ್ ಮೊದಲಾದ ಶಬ್ಧಗಳು ಯುವಕರಲ್ಲಿ ಕುತೂಹಲ ಮೂಡಿಸಿವಂತಾಗಿದೆ. ಜೊತೆಗೆ ನಡಿಗೆ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಮಾತುಕತೆ, ಅವರ ದುಃಖ ದುಮ್ಮಾನಗಳನ್ನು ಆಲಿಸುವುದು, ಪ್ರತಿಜ್ಞೆ ಸ್ವೀಕಾರ ಇತ್ಯಾದಿಗಳು ನಡೆಯುತ್ತಿದೆ. ಅಲ್ಲದೇ ಸಮೃದ್ಧ ನಡಿಗೆ ರಾಜಕೀಯ ಅಥವಾ ಚುನಾವಣಾ ವಿಷಯ ಎನ್ನುವುದಕ್ಕಿಂತ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಡೆಯುತ್ತಿರುವ ಆಂದೋಲನ ಎಂದು ಬಿಂಬಿಸಲಾಗುತ್ತಿದೆ. ಆ ಮೂಲಕ ಪಕ್ಷ ಹಾಗೂ ಸಂಘಟನೆ ಬಲಪಡಿಸಲಾಗುತ್ತಿದೆ ಎಂದು ವಿಶ್ಲೇಶಿಸಲಾಗುತ್ತಿದೆ.
ಬೂತ್ ಗಳಲ್ಲಿ ಬಿಜೆಪಿ ಪರ ವಾತಾವರಣ ಇದೆ ಎನ್ನಲಾಗುವುದಿಲ್ಲ. ಆದಾಗ್ಯೂ ಸಮಸ್ಯೆಗಳನ್ನು ಕೇಳುವ ಜನಪ್ರತಿನಿಧಿಯೊಬ್ಬ ಬೂತ್ ಮಟ್ಟಕ್ಕೆ ಬರುತ್ತಿದ್ದಾನೆ ಎನ್ನುವ ಖುಷಿ ಕೆಲವು ಶೇ. ಮತಗಳನ್ನು ಬಿಜೆಪಿಯತ್ತ ಎಳೆದುಕೊಳ್ಳುವುದು ಸಾಧ್ಯ ಎನ್ನಲಾಗುತ್ತಿದೆ. ಬೈಂದೂರು ತಾಲೂಕಾಗಿ ವಿಭಜನೆಯಾದ ಬಳಿಕ ಭೌಗೋಳಿಕ ವ್ಯತ್ಯಾಸಗಳನ್ನು ಈ ಕ್ಷೇತ್ರದಲ್ಲಿ ಕಾಣುತ್ತೇವೆ. ತೊಂಬಟ್ಟು, ಮಚ್ಚಟ್ಟು ಮೊದಲಾದ ಪ್ರದೇಶಗಳಿಗೆ ಗುಡ್ಡ, ನದಿ ದಾಟಿ ಹೋಗಬೇಕು. ಕರಾವಳಿ ಭಾಗದಲ್ಲಿ ಈ ಪರಿಸ್ಥಿತಿ ಇಲ್ಲ. ಇನ್ನು ಕೆಲವು ಭಾಗದಲ್ಲಿ ಕಾಡಿನ ಮಧ್ಯೆ ಊರುಗಳಿವೆ ರಾತ್ತಿ ಸಂಚಾರ ದುರ್ಲಭ. ಇದೆಲ್ಲವನ್ನೂ ಆಯಾ ಬೂತ್ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ. ಪರಿಹಾರ ಸಿಗುತ್ತೋ ಇಲ್ಲವೋ ಆದರೆ ಚುನಾವಣಾ ಸಂದರ್ಭದಲ್ಲಿ ಹೀಗೇ ಕೂತು ಮಾತನಾಡುವ ಧ್ವನಿಗಳಿಗೆ ಮತದಾರರು ಸ್ಪಂದಿಸುತ್ತಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರ.

ಇದೆಲ್ಲದರ ನಡುವೆ ಬೈಂದೂರು ಬಿಜೆಪಿಯಲ್ಲಿನ ಭಿನ್ನಮತ ಗುಟ್ಟಾಗಿಯೇನೂ ಉಳಿದಿಲ್ಲ. ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಬಣ ಒಂದೆಡೆಯಾದರೆ, ಶಾಸಕ ಗುರುರಾಜ್ ಗಂಟಿಹೊಳೆ ಬಣ ಇನ್ನೊಂದೆಡೆ. ಇನ್ನು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರ ಪರ ಒಲವು ಹೊಂದಿರುವ ಹಿಂದೂ ಯುವಕರ ಪಡೆ ಮನೆ ಮನೆ ಭೇಟಿಯಲ್ಲಿ ನಿರತವಾಗಿದೆ. ದೀಪಕ್ ಕುಮಾರ್ ಶೆಟ್ಟಿ ಮೇಲ್ನೋಟಕ್ಕೆ ಬಿಜೆಪಿ ಪರವಾಗಿ ಕೆಲಸ ಮಾಡಿದಂತೆ ಕಂಡರೂ ಕೆಲವು ವಿಚಾರಗಳಲ್ಲಿ ತಟಸ್ಥ ಧೋರಣೆ ಅನುಸರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆಧರೆ ಇದನ್ನು ಪೂರ್ಣ ನಂಬುವಂತಿಲ್ಲ. ಯಾಕೆಂದರೆ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರಮಾಪ್ತ ಎಂದೇ ಬಿಂಬಿತವಾಗಿರುವ ದೀಪಕ್ ಶೆಟ್ಟಿಗೆ ಅಧ್ಯಕ್ಷ ಸ್ಥಾನ ದೊರಕಿದ್ದೇ ರಾಘವೇಂದ್ರ ಅವರ ಕೃಪಾಕಟಾಕ್ಷದಿಂದ. ಹಾಗಾಗಿ ರಾಘವೇಂದ್ರ ಗೆದ್ದರೆ ಮಾತ್ರ ದೀಪಕ್ ಶೆಟ್ಟಿ ಕುರ್ಚಿ ಭದ್ರವಾಗುತ್ತದೆ. ಇಲ್ಲದೇ ಇದ್ದರೆ ಚುನಾವಣೆಯ ಬಳಿಕ ದೀಪಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಖಚಿತ. ಹಾಗಾಗಿ ಗೆದ್ದರೆ ದೀಪಕ್ ಶೆಟ್ಟಿಗೆ ಲಾಭ, ಸೋತರೆ ಗಂಟಿಹೊಳೆಗೆ ನಷ್ಟ ಎನ್ನುವಂತಾಗಿದೆ ಬೈಂದೂರು ಬಿಜೆಪಿ ಪರಿಸ್ಥಿತಿ.
ಇತ್ತ ಗುರುರಾಜ್ ಬಣದ ಜೊತೆಗೆ ಹೆಚ್ಚಿನ ಕಾರ್ಯಕರ್ತರು ಗುರುತಿಸಿಕೊಂಡಿದ್ದಾರೆ. ಮತ್ತು ಕ್ಷೇತ್ರದಲ್ಲಿ ತನ್ನ ಶಾಸಕತನದ ಅಸ್ತಿತ್ವ ಉಳಿಸಿಕೊಳ್ಳುವುದರ ಜೊತೆಗೆ ತನ್ನ ಬೆಂಬಲಿಗರನ್ನು ವೃದ್ಧಿಸಿಕೊಳ್ಳುವುದು ಕೂಡಾ ಗಂಟಿಹೊಳೆಗೆ ಅನಿವಾರ್ಯವಾಗಿದೆ. ಅಲ್ಲದೇ ಹಾಲೀ ಶಾಸಕರಾಗಿ ಈ ಚುನಾವಣೆಯಲ್ಲಿ ಕಡಿಮೆ ಮತಗಳು ಬಂದರೆ ಶಾಸಕರ ಪ್ರತಿಷ್ಟೆಗೆ ಕುಂದುಂಟಾಗುತ್ತದೆ ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ. ಇತ್ತ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಈ ಹಿಂದೆ ಬೈಂದೂರಿನಲ್ಲಿ ನಡೆಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಹಿಂದೂ ಮುಖಂಡರು ಬಹುತೇಕ ಮತ್ತೆ ಶಾಸಕರ ಜೊತೆ ಸೇರಿಕೊಳ್ಳುತ್ತಿರುವುದು ಈಶ್ವರಪ್ಪನವರ ಪಡೆಗೆ ಹಿನ್ನಡೆಯಾದರೆ ಆಶ್ಚರ್ಯವಿಲ್ಲ.

ಇದೆಲ್ಲದರ ನಡುವೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಕಾಂಗ್ರೆಸ್ ನಾಯಕರು ಅಷ್ಟೊಂದು ಸೀರಿಯಸ್ಸಾಗಿ ಫೀಲ್ಡ್ ಮಾಡುತ್ತಿಲ್ಲ. ಗೀತಾ ಕೂಡಾ ಅಷ್ಟೇ. ವೇದಿಕೆಯ ಭಾಷಣದಲ್ಲಿ ಮಾತನಾಡಿದಷ್ಟು ಕ್ಷೇತ್ರ ಭೇಟಿಯಲ್ಲಿ ಭಾಗವಹಿಸುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿಯ ಯೋಜನೆಗಳ ಬಗ್ಗೆ ಸ್ಪಷ್ಟತೆ ಕಾಣುತ್ತಿಲ್ಲದಿರುವುದು ಗೆಲುವಿಗೆ ಸವಾಲಾಗುತ್ತಿದೆ ಎನ್ನಿಸುತ್ತಿದೆ. ಕಾಂಗ್ರೆಸ್ ಅನುಷ್ಠಾನಗೊಳಿಸಿದ ಗ್ಯಾರೆಂಟಿಗಳು ಹಾಗೂ ಪ್ರಣಾಳಿಕೆಯಲ್ಲಿರುವ ಗ್ಯಾರೆಂಟಿಗಳನ್ನು ಮತದಾರರ ಮನಸ್ಸಿಗೆ ಮುಟ್ಟಿಸದೇ ಇದ್ದರೆ ಕಾಂಗ್ರೆಸ್ ಮಲಗುವುದು ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗರಿಷ್ಟ ಮತ ಪಡೆಯದೇ ಇದ್ದಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಅಜ್ಞಾತವಾಸಕ್ಕೆ ತೆರಳಬೇಕಾಗುತ್ತದೆ ಎನ್ನುವುದನ್ನು ಬೈಂದೂರು ಕಾಂಗ್ರೆಸ್ ನಾಯಕರು ಅರ್ಥಮಾಡಿಕೊಂಡಂತಿಲ್ಲ.
ಆದರೆ ಮತದಾರರು ಸದೃಢ ಭಾರತದ ನಿರ್ಮಾಣಕ್ಕೆ ಕಟಿ ಬದ್ಧರಾಗುವ ಮೂಲಕ ಸಂವಿಧಾನದ ಆಶಯಗಳಂತೆ ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ, ಹಾಗೂ ಸೌಹಾರ್ದತೆಗೆ ಬೆಲೆಕೊಟ್ಟು, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ತನ್ನೂರಿನ ಅಭಿವೃದ್ಧಿಗೆ ಪೂರಕವಾಗುವ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗಲೇ ಸಶಕ್ತ ಭಾರತ ನಿರ್ಮಾಣ ಸಾಧ್ಯ ಎನ್ನುವುದು ವಾಸ್ತವ.ಕಾಂ ಆಶಯ.