ಬಾರ್ಕೂರು: ಹದಿಹರೆಯದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳನ್ನು ಅರಿತುಕೊಂಡಾಗ ಆರೋಗ್ಯ ರಕ್ಷಣೆ ಸಾಧ್ಯ – ಡಾ. ಧನ್ಯಾ ಎನ್. ಹೆಗ್ಡೆ | ಆರೋಗ್ಯ, ಸ್ವಚ್ಛತೆ ಮತ್ತು ಆತ್ಮವಿಶ್ವಾಸದ ಅರಿವು ಮೂಡಿಸಿದ ಜಾಗೃತಿ ಕಾರ್ಯಕ್ರಮ

ಬಾರ್ಕೂರು: ಹದಿಹರೆಯದ ವಯಸ್ಸಿನಲ್ಲಿ ಹೆಣ್ಣುಮಕ್ಕಳು ತಮ್ಮಲ್ಲಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅರಿತುಕೊಂಡಾಗ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ವೈಯುಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ ಎಂದು ಕರ್ನಾಟಕ ಸರ್ಕಾರದ ಎನ್ಆರ್ಸಿ ವೈದ್ಯಕೀಯ ಅಧಿಕಾರಿ ಡಾ. ಧನ್ಯಾ ಎನ್. ಹೆಗ್ಡೆ ಹೇಳಿದರು.

ಅವರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರಿನ ವಿಮೆನ್ಸ್ ಫೋರಂ ವತಿಯಿಂದ ವಿದ್ಯಾರ್ಥಿನಿಯರಲ್ಲಿ ಆರೋಗ್ಯ, ವೈಯಕ್ತಿಕ ಸ್ವಚ್ಛತೆ, ಋತುಚಕ್ರದ ಆರೋಗ್ಯ, ಭಾವನಾತ್ಮಕ ಕ್ಷೇಮ ಹಾಗೂ ಆತ್ಮವಿಶ್ವಾಸದ ಕುರಿತು ಸಮಗ್ರ ಅರಿವು ಮೂಡಿಸುವ ಉದ್ದೇಶದಿಂದ “ಅರಿವು, ಆರೋಗ್ಯ ಮತ್ತು ಆತ್ಮವಿಶ್ವಾಸದ ಮೂಲಕ ಯುವ ಮನಸ್ಸುಗಳ ಸಬಲೀಕರಣ” ಎಂಬ ಆಶಯದೊಂದಿಗೆ ಹಮ್ಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭ ಋತುಚಕ್ರದೊಂದಿಗಿನ ಮೂಢನಂಬಿಕೆಗಳು, ಸಾಮಾಜಿಕ ಕಟ್ಟುಪಾಡುಗಳು ಹಾಗೂ ತಪ್ಪು ಕಲ್ಪನೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದ ಅವರು, ವಿದ್ಯಾರ್ಥಿನಿಯರಿಗೆ ಋತುಚಕ್ರದ ವೈಜ್ಞಾನಿಕ ಹಾಗೂ ಆರೋಗ್ಯಪೂರ್ಣ ನಿರ್ವಹಣೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. ಋತುಚಕ್ರವೆಂದರೇನು, ಅದರ ವಿವಿಧ ಹಂತಗಳು, ಋತುಚಕ್ರದ ಸಂದರ್ಭದಲ್ಲಿ ದೇಹದಲ್ಲಿ ಉಂಟಾಗುವ ಸಹಜ ಬದಲಾವಣೆಗಳು, ವೈಯಕ್ತಿಕ ಸ್ವಚ್ಛತಾ ಕ್ರಮಗಳು, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕುರಿತು ವಿವರಿಸಿದರು.

ಸುಜ್ಞಾನ ಎಜುಕೇಷನಲ್ ಟ್ರಸ್ಟ್ನ ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಪ್ರಸ್ತುತ ಪಿಯು ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ನಿರ್ಣಾಯಕ ಹಂತವಾಗಿದ್ದು, ಮುಂದಿನ ಶೈಕ್ಷಣಿಕ ಮತ್ತು ವೃತ್ತಿಜೀವನದ ದಿಕ್ಕನ್ನು ನಿರ್ಧರಿಸುವ ಜೀವನದ ಪ್ರಮುಖ ಘಟ್ಟವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎರಡೂ ಪರಸ್ಪರ ಪೂರಕವಾಗಿವೆ ಎಂದರು. ಎಂದು ಅವರು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ಆಚಾರ್ಯ ಹಾಗೂ ವಿಮೆನ್ಸ್ ಫೋರಂನ ಸಂಚಾಲಕರಾದ ಅನುಪಮಾ ಶೆಟ್ಟಿ ಉಪಸ್ಥಿತರಿದ್ದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿನಿ ಫಾತಿಮಾ ಅರ್ಫಾ ನಿರೂಪಿಸಿದರು. ನಿಖಿತಾ ಸ್ವಾಗತಿಸಿದರು. ರಿಯಾ ಸಂಪನ್ಮೂಲ ವ್ಯಕ್ತಿ ಹಾಗೂ ಗಣ್ಯರನ್ನು ಪರಿಚಯಿಸಿದರು. ಭೂಮಿಕಾ ವಂದಿಸಿದರು.
