ಕೋಟ: ಪಂಚವರ್ಣ ಮಹಿಳಾ ಮಂಡಲದ ಆಸಾಡಿ ಒಡ್ರ್ ಕ್ರೀಡಾಕೂಟ
ಕೋಟ: ಕುಂದಾಪ್ರ ಭಾಷೆ ಬದುಕು ಉಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ. ಅಂದಿನ ಕಾಲಘಟ್ಟದಲ್ಲಿ ಹಿರಿಯರು ನೀಡಿದ ಗ್ರಾಮ್ಯ ಸಂಸ್ಕೃತಿಗಳನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ಆಸಾಡಿ ಒಡ್ರ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಕ್ರೀಡೆಗಳನ್ನು ಮತ್ತೆ ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಹೇಳಿದರು.

ಇದೇ ಅಗಸ್ಟ್ 9ರಂದು ಕೋಟದ ಮಣೂರಿನಲ್ಲಿ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ನಡೆಯಲಿರುವ ಆಸಾಡಿ ಒಡ್ರ್ ಕಾರ್ಯಕ್ರಮದ ಅಂಗವಾಗಿ ಮಣೂರು ರಾಜಲಕ್ಷ್ಮೀ ಸಭಾಂಗಣದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೋಟ ರೈತ ಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಮಾತನಾಡಿ, ಕುಂದಾಪ್ರ ಭಾಷೆ ಆಸಾಡಿ ತಿಂಗಳ ಆಚರಣೆಗಳು ನಮ್ಮ ಜೀವನ ಪರಿಭಾಷೆಗಳಲ್ಲೊಂದು ಇಂತಹ ಕಾರ್ಯಕ್ರಮಗಳ ಮೂಲಕ ಭಾಷೆ,ಜೀವನ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಲಿದೆ ಎಂದರು.

ಕೋಟತಟ್ಟು ಗ್ರಾಮಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಅವರು ಆಸಾಡಿ ಗ್ರಾಮ್ಯ ಕ್ರೀಡೆ ಹಿಡಿಕಡ್ಡಿ ನೇಯುವ ಮೂಲಕ ಅನಾವರಣಗೊಳಿಸಿದರು. ಮುಂಬೈ ಒಎನ್ ಜಿಸಿ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಹಲಸಿನ ಕಡ್ಬಿನಕೊಟ್ಟೆ ಕಟ್ಟುವುದಕ್ಕೆ ಚಾಲನೆ ನೀಡಿದರು. ಕುಂದಾಪ್ರ ಭಾಷೆ ಬದ್ಕಿನ ಕ್ರೀಡೆಗಳಾದ ಗುಡ್ನಾ ಆಟ, ಹಲಸಿನ ಕಡ್ಬಿನಕೊಟ್ಟೆ ಕಟ್ಟುವುದು, ಹಿಡಿಕಡ್ಡಿ ನೇಯುವುದು, ಹಗ್ಗಜಗ್ಗಾಟ, ಸಂಗೀತ ಕುರ್ಚಿ ಸೇರಿದಂತೆ ಹಲವು ಗ್ರಾಮ್ಯ ಕ್ರೀಡೆಗಳು ಗಮನ ಸೆಳೆದವು,ಮಹಿಳೆಯರು ಮಕ್ಕಳು ಈ ಕ್ರೀಡೆಯಲ್ಲಿ ಭಾಗಿಯಾಗಿ ಬಹುಮಾನ ಗಿಟ್ಟಿಸಿಕೊಂಡರು.

ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಸ್ನೇಹಕೂಟ ಅಧ್ಯಕ್ಷೆ ಭಾರತಿ ವಿ ಮಯ್ಯ,ಪಂಚವರ್ಣದ ಗೌರವ ಸಲಹೆಗಾರ ವಿಷ್ಣುಮೂರ್ತಿ ಮಯ್ಯ,ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ ಉಪಸ್ಥಿತರಿದ್ದರು. ಕಲಾವತಿ ಅಶೋಕ್ ಪ್ರಾಸ್ರಾವಿಕ ನುಡಿಗಳನ್ನಾಡಿದರು.ವಸಂತಿ ಹಂದಟ್ಟು ಸ್ವಾಗತಿಸಿದರು.ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ, ವೀಣಾ ಪ್ರಕಾಶ್ ಪೂಜಾರಿ ವಂದಿಸಿದರು.
