ಮರವಂತೆ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಗೆ ಬಸ್ ಡಿಕ್ಕಿ – ಮೂವರು ಸಾವು, ಇನ್ನೂ ಹಲವರು ಗಂಭೀರ

vasthava.com
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಲಾರಿ ಬಸ್ ಭೀಕರ ಸರಣಿ ಅಪಘಾತದಲ್ಲಿ ಬಸ್ ಕ್ಲೀನರ್ ಸಹಿತ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಆರು ಮಂದಿ ಗಂಭೀರ ಗಾಯಗೊಂಡು, ಬಸ್ಸಿನಲ್ಲಿದ್ದ 20 ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾದ ಘಟನೆ ತ್ರಾಸಿ ಸಮೀಪದ ಮರವಂತೆ ಬೀಚ್ ನಲ್ಲಿ ನಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದವರನ್ನು ರಘು ಯಾನೆ ಉಮೇಶ, ರಂಗನಾಥ ಮತ್ತು ಹೇಮಂತ್ ಎಂದು ಗುರುತಿಸಲಾಗಿದೆ.

vasthava.com
ಬುಧವಾರ ಮಧ್ಯಾಹ್ನ ಅಪಘಾತ ನಡೆದಿದೆ. ಸರಕು ತುಂಬಿದ ಕೇರಳ ಮೂಲದ ಲಾರಿ ತ್ರಾಸಿ-ಮರವಂತೆ ಬೀಚಿನಲ್ಲಿ ನಿಂತಿತ್ತು. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಅಂತಿಮ ಹಂತದ ಬಿಕಾಂ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೊರಟಿದ್ದು, ಕೇರಳ ನೋಂದಣಿಯ ಖಾಸಗೀ ಬಸ್ಸಿನಲ್ಲಿ 24 ವಿದ್ಯಾರ್ಥಿ, 23 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 50 ಮಂದಿ ಇದ್ದರು. ಇವರೆಲ್ಲ ಮುರ್ಡೇಶ್ವರಕ್ಕೆ ತೆರಳಿದ್ದು ಅಲ್ಲಿಂದ ಬುಧವಾರ ಬೆಳಗ್ಗೆ ಉಡುಪಿ ದೇವಸ್ಥಾನಗಳಿಗೆ ಬಸ್ಸಿನಲ್ಲಿ ಬರುತ್ತಿದ್ದರು.

vasthava.com
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತ್ರಾಸಿ ಬೀಚ್ ಎದುರಿಗೆ ಬಸ್ ಬರುತ್ತಿದ್ದಂತೆ ಬಲಬದಿಯಲ್ಲಿದ್ದ ಸಮುದ್ರವನ್ನು ನೋಡುತ್ತಾ ಬಂದಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿದ ಬಸ್ ವೇಗವಾಗಿ ಬಂದು ಆಂದ್ರಪ್ರದೇಶ ಮೂಲದ ತೈಲ ಟ್ಯಾಂಕರ್ಗೆ ಢಿಕ್ಕಿ ಹೊಡೆಯಿತು. ಬಳಿಕ ಅಲ್ಲೇ ಮುಂದೆ ನಿಲ್ಲಿಸಿದ ಗೂಡ್ಸ್ ಲಾರಿಗೂ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟ್ಯಾಂಕರ್ ಮುಂಭಾಗವೂ ನುಜ್ಜುಗುಜ್ಜಾಗಿದೆ.

vasthava.com
ಆಪದ್ಭಾಂದವ 24*7 ಅಂಬ್ಯುಲೆನ್ಸ್ ನ ಇಬ್ರಾಹಿಂ ಗಂಗೊಳ್ಳಿ ಮತ್ತವರ ತಂಡ ಅಪಘಾತದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮೃತದೇಹಗಳನ್ನು ಮತ್ತು ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲು ಸಹಕರಿಸಿದರು. ಘಟನಾ ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ ನೀಡಿದ್ದಾರೆ. ಉಡುಪಿ ಎಸ್ಪಿ ಹರಿರಾಂ ಶಂಕರ್, ಡಿವೈಎಸ್ಪಿ ಕುಲಕರ್ಣಿ, ಗಂಗೊಳ್ಳಿ ಎಸೈ ಪವನ್ ನಾಯಕ್, ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
